ಮೂಡುಬಿದಿರೆ : 37ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತಿ ಹೊಂದಿರುವ ಕುಸುಮಾಧರ ಬಿ. ಅವರಿಗೆ ಮಂಗಳವಾರ ಕನ್ನಡ ಭವನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಪತ್ನಿ ಸ್ನೇಹಲತಾ ಸಮೇತರಾಗಿ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಬೆಳ್ಳಿಯ ಛಾಯಾಚಿತ್ರದೊಂದಿಗೆ ಚಿನ್ನದ ಉಂಗುರ ಸಹಿತ ಸನ್ಮಾನ ಪತ್ರ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಪಶು ಸಂಗೋಪನ ಇಲಾಖೆ ಉಪನಿರ್ದೇಶಕ ಹಾಗೂ ಆಡಳಿತ ಅಧಿಕಾರಿ ಅರುಣ್ ಶೆಟ್ಟಿ ಅವರು ಸಭಾಧ್ಯಕ್ಷತೆ ವಹಿಸಿ ಕುಸುಮಾಧರ ಅವರು ಸರಕಾರಿ ಇಲಾಖೆಯಲ್ಲಿ ಜನಪರವಾಗಿ ತಾಳ್ಮೆಯ ಕಾರ್ಯನಿರ್ವಹಣೆ ಯಿಂದಾಗಿ ಪ್ರೀತಿ ಪಾತ್ರರಾಗಿದ್ದಾರೆ ಎಂದರು.
ದ. ಕ ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಕೆ. ಪಿ. ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕುಸುಮಾಧರ ಅವರು ಹೂ ಮನಸ್ಸಿನವರು. ಕಾನೂನು ಮತ್ತು ಒತ್ತಡಗಳ ಮಧ್ಯೆ ಜನರಿಗೆ ಸಹಾಯವಾಗುವಂತೆ ಪಾರದಶ೯ಕವಾಗಿ ಆಡಳಿತ ನಡೆಸಿದವರು ಎಂದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಜಿಪಂ ಲೆಕ್ಕಾಧಿಕಾರಿ ಶಕುಂತಲಾ ಶೆಣೈ, ಮೂಡುಬಿದಿರೆ ತಾಲೂಕು ಪಂಚಾಯತ್ ನೂತನ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ಏಇಇ ಶಿವಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ನಟರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಉಜಿರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಅವರು ಕುಸುಮಾಧರ ಅವರ ಕಾರ್ಯ ವೈಖರಿಯನ್ನು ತಿಳಿಸಿದರು. ಜಿಲ್ಲೆಯ ಬೇರೆ ಬೇರೆ ತಾಲೂಕುಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಜನಪ್ರತಿನಿಧಿಗಳು ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಕುಸುಮಾಧರ ಅವರನ್ನು ಗೌರವಾರ್ಪಿಸಿದರು.
ಸಹಾಯಕ ನಿರ್ದೇಶಕರಾದ ಸಾಯಿಶ್ ಚೌಟ ಸ್ವಾಗತಿಸಿದರು. ಅಶ್ವಿನಿ, ಅನ್ವಯ, ಪ್ರಜ್ಞಾ ಪ್ರಾರ್ಥನೆಗೈದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಸಿದರು. ಬೆಳುವಾಯಿ ಪಂ ಅಭಿವೃದ್ಧಿ ಅಧಿಕಾರಿ ಸವಿತಾ ಸನ್ಮಾನ ಪತ್ರ ವಾಚಿಸಿದರು. ಶಿರ್ತಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ವಂದಿಸಿದರು.


0 Comments