ಮೂಡುಬಿದಿರೆ: ಕೇಂದ್ರ ಸರ್ಕಾರವು ಕಾರ್ಮಿಕ ವರ್ಗವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ. ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶದಿಂದ 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ, ಕಾರ್ಪೊರೇಟ್ ಪರವಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಇದು ಕಾರ್ಮಿಕರನ್ನು ಮತ್ತೆ ಗುಲಾಮಗಿರಿಯತ್ತ ತಳ್ಳುವ ಪ್ರಯತ್ನ,” ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಬಿ.ಎಂ. ಭಟ್ ಎಂದು ಹೇಳಿದರು.
ಅವರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ರೈತ–ಕಾರ್ಮಿಕರ ಜಂಟಿ ಸಮಿತಿಯ ಆಶ್ರಯದಲ್ಲಿ ಫೆಬ್ರವರಿ 12ರಂದು ದೇಶಾದ್ಯಂತ ಅಖಿಲ ಭಾರತ ಮಹಾ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಇದರ ಪೂರ್ವಭಾವಿಯಾಗಿ ಬುಧವಾರ ಮೂಡುಬಿದಿರೆಯಲ್ಲಿ ನಡೆದ ವಾಹನ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು.
“ಮಹಾ ಮುಷ್ಕರ ಕೇವಲ ಕಾರ್ಮಿಕರ ಹೋರಾಟವಲ್ಲ; ಇದು ಸಾಮಾನ್ಯ ಜನರ ಬದುಕಿನ ಹೋರಾಟ. ಆದ್ದರಿಂದ ಎಲ್ಲರೂ ಫೆಬ್ರವರಿ 12ರಂದು ಒಂದು ದಿನದ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲಿಸಬೇಕು,” ಎಂದು ಅವರು ಮನವಿ ಮಾಡಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾದಲ್ಲಿ ನೂರಾರು ಕಾರ್ಮಿಕರು, ಸಂಘಟನೆಗಳ ಮುಖಂಡರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾರ್ಮಿಕರ ಹಕ್ಕು ರಕ್ಷಣೆಗೆ ಒತ್ತಾಯಿಸಿ ಬ್ಯಾನರ್ಗಳು, ಫಲಕಗಳನ್ನು ಪ್ರದರ್ಶಿಸಲಾಯಿತು.
ಮುಖಂಡರಾದ ಸೀತಾರಾಮ್, ಸುನಿಲ್ ಕುಮಾರ್ ಬಜಾಲ್, ಯಾದವ ಶೆಟ್ಟಿ, ವಸಂತ ಆಚಾರಿ, ರಮಣಿ, ಯೋಗೀಶ್ ಜಪ್ಪಿನಮೊಗರು,ರಾಧ,ವಸಂತಿ, ಲೋಲಾಕ್ಷಿ, ಜಯಶ್ರೀ ,ಮನೋಜ್
ಅಭಿಷೇಕ್ ಮತ್ತಿತರರು ಈ ಸಂದಭ೯ದಲ್ಲಿದ್ದರು.


0 Comments