ಮೂಡುಬಿದಿರೆ: "ದೇಶದಲ್ಲಿ ಭೂಕಂಪ, ಕೊರೊನಾದಂತಹ ಮಹಾಮಾರಿ ಮತ್ತು ಯುದ್ಧದಂತಹ ಕಠಿಣ ಸಂದರ್ಭಗಳಲ್ಲಿ ನಿರಾಶ್ರಿತರಿಗೆ ಆಸರೆಯಾಗಿ ರಾಷ್ಟ್ರೀಯ ನಿಂತ ಶಕ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಂತಿದೆ. ನಮ್ಮ ಸಂಸ್ಕೃತಿಯು ಇಂದು ವಿಕೃತಿಯ ಮನೋಭಾವದ ಕಾಲಘಟ್ಟದಲ್ಲಿ ಸಾಗುತ್ತಿರುವ ಈ ಸಂದಭ೯ದಲ್ಲಿ ಸ್ತ್ರೀಯರಿಗೆ ಮತ್ತು ಸಮಾಜಕ್ಕೆ ಸಂಸ್ಕಾರಯುತ ಜೀವನ ರೂಪಿಸುವಲ್ಲಿ ಸಂಘದ ಪಾತ್ರ ಪ್ರಮುಖವಾದುದು ಎಂದು ಮೂಡುಬಿದಿರೆ ಜೈನಮಠದ ಶ್ರೀ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಅವರು ಮೂಡುಬಿದಿರೆ ತಾಲೂಕು ಆಯೋಜನಾ ಸಮಿತಿಯಿಂದ ಹೊಸಬೆಟ್ಟು ಮಂಡಲದ ತೋಡಾರು, ಇರುವೈಲು, ಪುಚ್ಚಮೊಗರು ಹಾಗೂ ಹೊಸಬೆಟ್ಟು ಗ್ರಾಮಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ 'ಹಿಂದೂ ಸಂಗಮ'ದಲ್ಲಿ ಗೋಪೂಜೆ ನೆರವೇರಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ ಆಶೀರ್ವಚನ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರಕ್ ಸುರೇಶ್ ಜಿ. ಬೌದ್ಧಿಕ್ ನೀಡಿ, ಸಮಾಜದಲ್ಲಿ ಬದಲಾವಣೆ ತರಲು ಸ್ವಯಂಸೇವಕರು ಅಳವಡಿಸಿಕೊಳ್ಳಬೇಕಾದ ಜೀವನಶೈಲಿಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತೋಡಾರು ಶಕ್ತಿ ಕೇಂದ್ರದ ಅಧ್ಯಕ್ಷ ಸುನೀಲ್ ಶೆಟ್ಟಿ ಹಾನ್ಯಗುತ್ತು, ಸದಾಶಿವ ಟಿ. ಸುವರ್ಣ ಬಾರ್ದಿಲ, ಶಿವಪ್ರಸಾದ್ ಭಾವದಬೈಲು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ರೈತ ಮುಖಂಡ ಶಾಂತಿಪ್ರಸಾದ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಣಮ್ ತೋಡಾರು ಸ್ವಾಗತಿಸಿದರು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ರಿಷಂತ್ ತೋಡಾರು ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಶೋಭಾಯಾತ್ರೆ :
ಕಾರ್ಯಕ್ರಮದ ಮೊದಲಿಗೆ
ಶ್ರೀ ಕ್ಷೇತ್ರ ತೋಡಾರು ದ್ವಾರದ ಬಳಿಯಿಂದ ದೈವಸ್ಥಾನದ ವಠಾರದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಪೂರ್ಣಕುಂಭ ಹಿಡಿದ ಮಹಿಳೆಯರು, ವಿವಿಧ ಭಜನಾ ತಂಡಗಳ ಕುಣಿತ ಭಜನೆ, ಚೆಂಡೆ ಹಾಗೂ ವಾದ್ಯಘೋಷಗಳು ಮೆರವಣಿಗೆಗೆ ಕಳೆ ನೀಡಿದವು.
ಹಿಂದೂ ಸಂಗಮದ ಅಂಗವಾಗಿ ಮಕ್ಕಳಿಗೆ ಧಾರ್ಮಿಕ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು.


0 Comments