ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್:ಜಿಲ್ಲಾ ಮಟ್ಟದ ಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾದೇಶಿಕ  ಭಜನಾ ಪರಿಷತ್:ಜಿಲ್ಲಾ ಮಟ್ಟದ ಸಭೆ

ದಿನಾಂಕ 19-2-2025ನೇ ಬುಧವಾರ ಬಂಟ್ವಾಳ ಯೋಜನಾ ಕಚೇರಿಯ ಸಭಾಂಗಣದಲ್ಲಿ, ಜಿಲ್ಲಾ ಮಟ್ಟದ ಭಜನಾ ಪರಿಷತ್ ಸಭೆ ನಡೆಯಿತು.

ಭಜನ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಭಜನಾ ಮಂಡಳಿ ಹಾಗೂ ಮಂದಿರಗಳ ರಿಜಿಸ್ಟ್ರೇಷನ್ ಮುಂತಾದ ದಾಖಲಾತಿಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದ್ದು ಅದಕ್ಕೆ ಬೇಕಾದ ಮಾಹಿತಿಗಳನ್ನು ನೀಡಿದರು. ಭಜನಾ ಪರಿಷತ್ತು ನಗರ ಭಜನೆ,ಮನೆ ಮನ ಭಜನೆ, ಸಂಧ್ಯಾ ಭಜನೆ ಮುಖಾಂತರವಾಗಿ ನಿರಂತರ ಚಟುವಟಿಕೆಗಳಿಂದ ಕೂಡಿರಬೇಕು ಎಂದರು.

ರಾಜ್ಯ ಭಜನಾ ಪರಿಷತ್ತಿನ ಸಂಚಾಲಕರಾದ ಶ್ರೀ ಜಿ. ಸುಬ್ರಹ್ಮಣ್ಯ ಪ್ರಸಾದ್ ರವರು ಮಾಹಿತಿ ಮಾರ್ಗದರ್ಶನವನ್ನು ನೀಡುತ್ತಾ, ಭಜನಾ ಮಂಡಳಿಗಳ ಹಾಗೂ ಮಂದಿರಗಳ ಪ್ರಾಥಮಿಕ ಅವಶ್ಯಕತೆಗಳಿಗೆ ಅನುಗುಣವಾಗಿ ವಲಯ ಭಜನಾ ಪರಿಷತ್ತ್ ಸಂಯೋಜಕರು ಸ್ಪಂದಿಸುವಂತೆ ಕರೆ ನೀಡಿದರು.

ಶ್ರೀ ಕ್ಷೇತ್ರದಿಂದ ಹಾಗೂ ಸರಕಾರದಿಂದ ಸಿಗುವ ಅನುದಾನಗಳ ಒದಗಣೆಗೆ  ಪೂರಕವಾಗುವಂತೆ ಹಾಗೂ ಭಜನಾ ಮಂಡಳಿಗಳ ಸದೃಢತೆಗೆ ಬೇಕಾಗಿ ಸಮನ್ವಯಾಧಿಕಾರಿಗಳನ್ನು ನೇಮಕ ಮಾಡಿದ್ದು ಭಜನಾ ಪರಿಷತ್ ಪದಾಧಿಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು.ಪೂಜ್ಯರ ಆಶಯದಂತೆ ಭಜನಾ ತರಬೇತಿ  ಕಮ್ಮಟದ ಮುಖಾಂತರ ಪ್ರತಿ ವರ್ಷ ನೂರಾರು ಮಂದಿ. ತರಬೇತಿ ಪಡೆದುಕೊಳ್ಳುತ್ತಿದ್ದು ಗ್ರಾಮ ಮಟ್ಟದಲ್ಲಿ ಭಜನಾ ಮಂಡಳಿಗಳನ್ನು ಕಟ್ಟಿ ಬೆಳೆಸುತ್ತಿದ್ದಾರೆ ಎಂದರು.

 ನಿಸ್ವಾರ್ಥವಾಗಿ ಸೇವೆಗೆಯುತ್ತಿರುವ ತಾಲೂಕು ಹಾಗೂ ವಲಯ ಭಜನ ಪರಿಷತ್ತಿನ ಪದಾಧಿಕಾರಿಗಳ ಶ್ರಮವನ್ನು ವಿಶೇಷವಾಗಿ ಗೌರವಿಸಿದರು. ಪ್ರತಿಯೊಂದು ಗ್ರಾಮದಲ್ಲಿಯೂ ನಗರ ಭಜನೆಯ ಮುಖಾಂತರ  ಸಂಘಟನಾತ್ಮಕವಾಗಿ ಭಜನಾ ಮಂಡಳಿಗಳನ್ನು ಬೆಳೆಸಬೇಕು ಹಾಗೂ ಬೇಸಿಗೆ ರಜೆಯ ಸಂದರ್ಭದಲ್ಲಿ  ಮಕ್ಕಳಿಗೆ ಭಜನಾ ತರಬೇತಿಯನ್ನು ಆಯೋಜಿಸುವುದು ಮತ್ತು ಕಡಿಮೆ ಖರ್ಚಿನಲ್ಲಿ ಮನೆ ಮನೆ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಉತ್ತಮ ರೀತಿಯ ಪರಿವರ್ತನೆ ಸಾಧ್ಯ ಎಂದರು.


ಮಂಗಳೂರು,ಮೂಡುಬಿದಿರೆ, ಕಡಬ,ಕಾಸರಗೋಡು, ಮಂಜೇಶ್ವರ, ಪುತ್ತೂರು, ವಿಟ್ಲ, ಬಂಟ್ವಾಳ, ಸುಳ್ಯ, ಬೆಳ್ತಂಗಡಿ  ತಾಲೂಕಿನ ಅಧ್ಯಕ್ಷರುಗಳು ತಮ್ಮ ತಾಲೂಕಿನ ಪರಿಷತ್ ಸಾಧನೆಯ ವರದಿ ಹಾಗೂ ಅನಿಸಿಕೆಗಳನ್ನು ತಿಳಿಸಿದರು.

ಆರಂಭದಿಂದಲೂ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ನ ನೆರಳಡಿಯಲ್ಲೇ ನಾವು ಕಲಿತು ಬೆಳೆದವರು, ಹಾಗಾಗಿ ಭಜನಾ ಕ್ಷೇತ್ರದ ಒಗ್ಗಟ್ಟಿಗಾಗಿ ಶ್ರಮಿಸುವ ಸಂದರ್ಭದಲ್ಲಿ ವಿಘ್ನಸಂತೋಷಿಗಳಿಗೆ ಬೇಕಾಗಿ ಹಿಂಜರಿಯ ಬೇಕಾಗಿಲ್ಲ ಪೂಜ್ಯರ ಅನುಗ್ರಹದಂತೆ ಭಜನಾ ಪರಿಷತ್ತನ್ನ ಪೋಷಿಸುವುದೇ ನಮ್ಮ ಜವಾಬ್ದಾರಿ ಎಂಬ ಒಕ್ಕೊರೊಲ ಧ್ವನಿಯನ್ನು ಪ್ರಸ್ತುತಪಡಿಸಿದರು. 


ಜಿಲ್ಲಾ ನಿರ್ದೇಶಕರಾದ ಶ್ರೀ ಮಹಾಬಲ ಕುಲಾಲ್ ರವರು ಹಿಂದೂ ಸಮಾಜವನ್ನು ಒಂದೇ ಸೂರಿನಡಿ ಸೇರಿಸಲು ಹಾಗೂ ಸನಾತನ ಪರಂಪರೆಯ ನಂಬಿಕೆ ಉಳಿಸಿ ಬೆಳೆಸಲು ಮಾತ್ರವಲ್ಲದೆ ದೇವರನ್ನು ಅತ್ಯಂತ ಸಮೀಪದಲ್ಲಿ ಕಾಣಲು ಭಜನೆ ಒಂದು ಮಾಧ್ಯಮವಾಗಿದೆ. ಪೂಜ್ಯರ ಕನಸಿನಂತೆ ಭಜನಾ ಪರಿಷತ್ತಿನ ಮುಖಾಂತರವಾಗಿ ನಾಡಿನದ್ಯಂತ ಭಜನಾ ಮಂದಿರ ಹಾಗೂ ಮಂಡಳಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.ಇದು ಉತ್ತಮ ಬೆಳವಣಿಗೆ ಎಂದರು.


ಶ್ರೀ ರಾಜೇಂದ್ರ ಕುಮಾರ್ ಬಸ್ರೂರು ಉಪಾಧ್ಯಕ್ಷರು ರಾಜ್ಯ ಭಜನಾ ಪರಿಷತ್ ಧರ್ಮಸ್ಥಳ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು. ದಿನೇಶ್ ಮಾಮೇಶ್ವರ ನಿಕಟ ಪೂರ್ವ ಅಧ್ಯಕ್ಷರು ಬಂಟ್ವಾಳ ಉಪಸ್ತಿತರಿದ್ದರು.


ಬಂಟ್ವಾಳ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಜಯನಂದ ರವರು ಸ್ವಾಗತಿಸಿದರು.ಶ್ರೀಮತಿ ಶಶಿಕಲಾ ಕೊಯ್ಲ ರವರು ಪ್ರಾರ್ಥನೆಯನ್ನು ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿ ಸರ್ವರಿಗೂ ಧನ್ಯವಾದವಿತ್ತರು.

Post a Comment

0 Comments