ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ..... * ವಿರಾಸತ್ ನಲ್ಲಿ ಹಿಂದೂಸ್ಥಾನಿ ಗಾಯಕನ ದಾಸರ ಪದಕ್ಕೆ ಮನಸೋತ ಸಂಗೀತಾಭಿಮಾನಿಗಳು

ಜಾಹೀರಾತು/Advertisment
ಜಾಹೀರಾತು/Advertisment

 ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ.....

  * ವಿರಾಸತ್ ನಲ್ಲಿ  ಹಿಂದೂಸ್ಥಾನಿ ಗಾಯಕನ ದಾಸರ ಪದಕ್ಕೆ ಮನಸೋತ ಸಂಗೀತಾಭಿಮಾನಿಗಳು

  ಮೂಡುಬಿದಿರೆ: ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ..ಬರಿದೆ ಮಾತೇಕಿನ್ನು ಅರಿ ಪೇಳುವೆನಯ್ಯಾ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು’ ಎಂಬ ಕನಕದಾಸರ ಭಕ್ತಿಯನ್ನೊಳಗೊಂಡ ಹಿಂದೂಸ್ಥಾನಿ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಅವರ ಪದಕ್ಕೆ  ಎರಡನೇ ದಿನದ ವಿರಾಸತ್ ನಲ್ಲಿ ಸಂಗೀತಾಭಿಮಾನಿಗಳು ಭಾವಪರವಶರಾದರು. 


ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಗಾಯಕ  ಪಂಡಿತ್ ಪದ್ಮಶ್ರೀ ವೆಂಕಟೇಶ್ ಕುಮಾರ್ ಅವರು ಹಿಂದೂಸ್ಥಾನಿ ಗಾಯನದ ರಸಯಾತ್ರೆಯನ್ನು ಆರಂಭಿಸಿದ ಅವರು  ಶ್ರೀ ರಾಗದ ಮೂಲಕ ಕಛೇರಿ ಆರಂಭಿಸಿದ ಅವರು ಮುರಲೀ ಸ್ತುತಿಸುತ್ತಾ 'ಆನಂದ ದೇ ಮುಖ ಚಂದ್ರ ಐ ಸೇ ಚಾಂದನಿ ಸಾಂದ್ರ...'ಬಾದಲ್ ಆಯೇ ನಭಾ ಮೇ...ಯಾದ' ಗಾನ ಸುಧೆ ಹರಿಸಿದರು.

ಶ್ರೋತ್ರವಿನ ಯೋಚನಾ ಲಹರಿಗೆ ತೆರೆದುಕೊಳ್ಳುವ ಪುರಾತನ ಶ್ರೀ ರಾಗ ಹಾಡಿದ ಅವರು, ' ಗಾಯನ ಕೇಳುಗರಿಗೆ ಸುಲಲಿತ ಹಾಗೂ ಇಂಪಾಗಿರಬೇಕು' ಎಂದು ಕೇಳುವುದನ್ನೂ ಕಲಿಸಿದರು. ಆಲಿಸುವ ಮನಸ್ಸು ತಂಪಾಗಿರಬೇಕು ಎಂದು ನೆನಪಿಸಿದರು.

ಶ್ರೀ

ಬಳಿಕ, 'ಕಮಲೇ... ಕಮಲಾಲಯೇ ಕಮಲ ಭವಾದಿ ಸುರ ವಂದಿತ ಪದೇ... ತ್ರಿಗುಣಾಭಿಮಾನಿಯೇ' ಎಂಬ ದಾಸವಾಣಿಯ ಮೂಲಕ  ಲಕ್ಷ್ಮೀಯನ್ನು  ಸ್ತುತಿ ಭಜಿಸಿದರು. ಪ್ರದೀಪ ಮತ್ತು ಮಿಶ್ರ ರಾಗದಲ್ಲಿ ಭಜಿಸಿದರು.

 ವಚನದತ್ತ ಸಾಗಿದ ಅವರು 'ಅಕ್ಕಾ ಕೇಳವ್ವಾ ನಾ ಕನಸೊಂದ ಕಂಡೆ, ಅಕ್ಕಿ ಅಡಕೆ ಓಲೆ ತೆಂಗಿನಕಾಯಿ' ಎಂದು ಅಕ್ಕಮಹಾದೇವಿ ವಚನಗಳನ್ನು ಹಾಡಿದರು.

'ಕೂಗಿದರೂ ದನಿ ಕೇಳದೇ ... ಕೃಷ್ಣಾ' ಎಂದು ಬೀಮ ಪಾಲಸ ರಾಗದಲ್ಲಿ ಕೃಷ್ಣನ ಸ್ತುತಿಸಿದರು. ಪ್ರೇಕ್ಷಕರ ಕಂಡು 'ಬರೋಬ್ಬರಿ ಆತ್ರಿ' ಎಂದು ಸಂತಸ ವ್ಯಕ್ತಪಡಿಸಿದರು.

 ಕರತಾಡನದ ಅಲೆ ಉಕ್ಕಿ ಬಂತು. 'ತೊರೆದು ಜೀವಿಸ ಬಹುದೇ...' ಎಂದು ಶ್ರೋತ್ರುಗಳು ದನಿ ನೀಡಿದರು. 'ಆದಿಕೇಶವರಾಯ... ಎಂಬ ಏರುಗತಿಗೆ ಪ್ರೇಕ್ಷಕರು ಧನ್ಯರಾದರು.

'ಇಲ್ಲಿನ ವಿದ್ಯಾರ್ಥಿಗಳು ಸಂಗೀತ ಆಸಕ್ತಿ ವ್ಯಕ್ತಪಡಿಸಿದರು. ನಿಮಗೆ ಕಲಿಕೆ ಜೊತೆ ಆಳ್ವಾಸ್ ನಲ್ಲಿ ಸಂಸ್ಕಾರ ಕೊಡುತ್ತಾರೆ. ಒಳ್ಳೆಯ ವಿದ್ಯಾ ಸಂಸ್ಥೆ' ಎಂದು ವೆಂಕಟೇಶ್ ಶ್ಲಾಘಿಸಿದರು.

ಒಂದು ಕಾಲದಲ್ಲಿ ಲತಾ ಮಂಗೇಶ್ಕರ್ ಸ್ವರದಲ್ಲಿ ಖ್ಯಾತಿ ಪಡೆದಿದ್ದ, 'ಪಾವೋಜಿ ಮೈನೇ.. ರಾಮ ರತನ್ ಧನ್ ಪಾಯೋ..' ಹಾಡಿದಾಗ ಮಹಿಳೆಯರೆಲ್ಲ ತಲೆದೂಗಿದರು.

' ಪಾರ್ವತಿಯೇ ದೇವಿಯೇ,  ಗಿರಿಜೆಯೇ, ಕಲ್ಯಾಣಿಯೇ... ಸರ್ವ ಮಂಗಳ ದೇವಿಯೇ'... ಎನ್ನುತ್ತಾ ಶಂಕರನ ರಾಣಿ ಪಾರ್ವತಿಯ ಸ್ತುತಿಸಿದರು.

'ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥ ಪೂರ್ಣಪ್ರಜ್ಞರ ಸರ್ವಜ್ಞ ರಾಯರ ... ಮಧ್ವ ಮುನಿಯ' ಎಂದು ವಾದಿರಾಜರ ಸಾಲುಗಳನ್ನು ಬೈರವಿ ರಾಗದಲ್ಲಿ ಹಾಡಿ ತೆರೆ ಎಳೆದರು.

ಬಳ್ಳಾರಿಯ ಲಕ್ಷ್ಮೀಪುರದ 71ರ ಹರೆಯದ ಎಂ. ವೆಂಕಟೇಶ್ ಕುಮಾರ್ ಬಿದಿರೆಯ ನಾಡಲ್ಲಿ ದಾಸಭಕ್ತಿಯನ್ನೇ ಉಕ್ಕೇರಿಸಿದರು. ಮುಸ್ಸಂಜೆಯ ಹೊಂಗಿರಣದ ನಡುವೆ ವರ್ಣಮಯ ಬೆಳಕಿನ ಚಿತ್ತಾರ ಹಾಗೂ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ್ದ ಬೃಹತ್ ಸಭಾಂಗಣದಲ್ಲಿ ಗ್ವಾಲಿಯರ್ ಘರಾಣಾದ ವೆಂಕಟೇಶ್ ಗಾನದ ವರ್ಷಧಾರೆಯನ್ನೇ ಹರಿಸಿದರು. 

ಜನಪದ ಗಾಯನದ ಕುಟುಂಬದಿಂದ ಬಂದು, ಗದಗದ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಭಕ್ತಿ ಸಂಗೀತದ ಲಹರಿಯನ್ನು ನಾಡಿನಾದ್ಯಂತ ಹರಿಸಿದ ವೆಂಕಟೇಶರ ಹರಿಸ್ತುತಿಗೆ ಮಾರು ಹೋಗದವರಿಲ್ಲ. ಮಂಗಳವಾರ ಭಕ್ತಿಯ ವೈಭವ ಕಂಡಿದ್ದ ಪ್ರೇಕ್ಷಕರು ಬುಧವಾರ ಭಕ್ತಿ ಲಯದಲ್ಲಿ ಮುಳುಗಿದರು. ಸ್ವರ ಲೋಕದಲ್ಲಿ ಮಿಂದೆದ್ದರು. 

ಪಂಡಿತ್ ಭೀಮಸೇನ ಜೋಶಿ ಮೆಚ್ಚಿಗೆ ಸೂಚಿಸಿದ್ದ ಸ್ವರದ ಲಾಲಿತ್ಯಕ್ಕೆ ಸೇರಿದವರೆಲ್ಲ ಮೂಕಸ್ಮಿತ. ಹರಿಸ್ಮರಣೆ, ಭಕ್ತಿ ಸುಧೆ ಮತ್ತೆ ಅದೇ ನಿನಾದ..

ಹಾರ್ಮೋನಿಯಂನಲ್ಲಿ ನರೇಂದ್ರ ಎಲ್. ನಾಯಕ್, ತಬಲಾದಲ್ಲಿ ಕೇಶವ ಜೋಶಿ ಮತ್ತು ವಿಘ್ನೇಶ್ ಕಾಮತ್ ಹಾಗೂ ತಾನ್ ಪುರಾ (ತಂಬೂರಿ)ದಲ್ಲಿ ರಮೇಶ ಕೋಲಕುಂದ ಮತ್ತು ರಾಘವ ಹೆಗಡೆ ಶಿರಸಿ ಹಾಗೂ ತಾಳದಲ್ಲಿ ವಿನೀತ್ ಭಟ್ ಕೋಟೇಶ್ವರ ಸಾಥ್ ನೀಡಿದರು. ಮಾಧವಿ ಮತ್ತು ಮೇಘ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments