ಡಾ. ಮೋಹನ್ ಆಳ್ವ ಅವರಿಗೆ ‘ಕರಾವಳಿ ಸೌರಭ’ ರಾಜ್ಯ ಪ್ರಶಸ್ತಿ ಪ್ರದಾನ

ಜಾಹೀರಾತು/Advertisment
ಜಾಹೀರಾತು/Advertisment

 ಡಾ. ಮೋಹನ್ ಆಳ್ವ ಅವರಿಗೆ ‘ಕರಾವಳಿ ಸೌರಭ’ ರಾಜ್ಯ ಪ್ರಶಸ್ತಿ ಪ್ರದಾನ

 ಮೂಡುಬಿದಿರೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ‘ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ), ಬಂಟ್ವಾಳ ಹಾಗೂ ಚಿಣ್ಣರ ಲೋಕ ಸೇವಾ ಬಂಧು (ರಿ) ಬಂಟ್ವಾಳ’ ಇವುಗಳ ಸಂಯುಕ್ತ ಅಶ್ರಯದಲ್ಲಿ ಬಿ.ಸಿ.ರೋಡು ವೃತ್ತ ಬಳಿಯ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಆರಂಭವಾದ ಕರಾವಳಿ ಕಲೋತ್ಸವ 2024-25 ಮತ್ತು ‘ಬಹುಸಂಸ್ಕೃತಿ ಸಂಭ್ರಮ’ ಕಾರ್ಯಕ್ರಮದ ಎರಡನೇ ದಿನದ ಶನಿವಾರ ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರಿಗೆ ‘ಕರಾವಳಿ ಸೌರಭ’ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ತುಳು ಸಂಪ್ರದಾಯದಂತೆ ಫಲವಸ್ತು, ಅಕ್ಕಿಮುಡಿ, ಸೀಯಾಳ, ತರಕಾರಿ, ಭಾವಚಿತ್ರ ಸಹಿತ ವಸ್ತುಗಳನ್ನು ಪಲ್ಲಕಿಯಲ್ಲಿ ತಂದು ಅರ್ಥಪೂರ್ಣ ಮತ್ತು ಅತ್ಯಂತ ವೈಶಿಷ್ಠಪೂರ್ಣವಾಗಿ ಡಾ. ಆಳ್ವರನ್ನು ಸನ್ಮಾನಿಸಲಾಯಿತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮೋಹನ್ ಆಳ್ವ ಅವರು, ಪ್ರಶಸ್ತಿಯ ಹಿಂದಿರುವ ಪ್ರೀತಿ, ವಿಶ್ವಾಸವನ್ನು ಅರಿತಿದ್ದೆನೆ. ಪ್ರಕೃತಿ ನಿಯಮದಂತೆ ಸಮಾಜದ ಪರಿಕಲ್ಪನೆಯಡಿ ಕೆಲಸಮಾಡುತ್ತಿದ್ದು, ನಂಬಿಕೆಗಳು ಈಗಲೂ ಉಳಿದಿದೆ ಎಂದರು.


ಕಳೆದ ಸಮಯ ಚೆನ್ನಾಗಿತ್ತು. ಮುಂದಿನ ದಿನಗಳು, ಜೀವನಪದ್ದತಿ ಆತಂಕವನ್ನುಂಟುಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ ಡಾ. ಆಳ್ವ ಅವರು ಭವಿಷ್ಯದಲ್ಲಿ ಜೀವನವನ್ನು ಜಾಗೃತೆಯಿಂದ ನಡೆಯಬೇಕಾದ ಕಾಲಘಟ್ಟದಲ್ಲಿದ್ದು, ಬಯಲು ಶಾಲೆಯ ವಿದ್ಯಾರ್ಥಿಯಿಂದಾಗಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.


ದೇಶದ ಮಾನವ ಸಂಪತ್ತಾಗಿರುವ ಯುವ ಶಕ್ತಿ ಬಹುದೊಡ್ಡ ಶಕ್ತಿಯಾಗಿದೆ. ಪ್ರಸಕ್ತ ದಿನಗಳಲ್ಲಿ ಬದುಕು ರೂಪಿಸಲು ಪಠ್ಯದಿಂದ ಸಾಧ್ಯವಿಲ್ಲ ಹೃದಯವಂತಿಕೆಯ ಶಿಕ್ಷಣದ ಅಗತ್ಯವಿದೆ. ಕಲೆಗಳೇ ಹೃದಯಕ್ಕೆ ಕೊಡುವ ಸಂಸ್ಕಾರವಾಗಿದೆ. ಸುಂದರವಾದ ಬದುಕು ಕಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.


ಬಿ.ಸಿ.ರೋಡು ಸಂಚಯಗಿರಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ಪ್ರೊ. ತುಕರಾಮ ಪೂಜಾರಿ ಅಭಿನಂದನಾ ಭಾಷಣಗೈದು, ಪ್ರೀತಿ ಮತ್ತು ಅಭಿಮಾನದ ಸಂಕೇತವಾಗಿ ಮೋಹನ್ ಆಳ್ವ ಅವರಿಗೆ ಈ ಸನ್ಮಾನ ಪ್ರದಾನ ಮಾಡಲಾಗುತ್ತಿದೆ. ಅಸಾಮಾನ್ಯ ವ್ಯಕ್ತತ್ವದ ಮೋಹನ ಆಳ್ವರು ಸಾಂಸ್ಕೃತಿಕಲೋಕದ ಸುನಾಮಿಯಾಗಿದ್ದು, ಸರಳತೆಗೆ ಅವರು ಸಾಕ್ಷಿಯಾಗಿದ್ದು, ನನಗೂ ಅವರೋರ್ವ ಮಾರ್ಗದರ್ಶಕರು, ರೋಲ್ ಮೋಡಲ್ ಆಗಿದ್ದಾರೆ ಎಂದರು.


ಬುದ್ದಿಗಲ್ಲ, ಹೃದಯಕ್ಕೆ ಸಿಕ್ಕಿದ ಶಿಕ್ಷಣ ಜೀವನಪರ್ಯಂತ ಉಳಿಯುತ್ತದೆ. ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಪೂರಕವಾದ ಶಿಕ್ಷಣ ಆಳ್ವರ ಶಿಕ್ಷಣ ಸಂಸ್ಥೆಯಲ್ಲಿ ಸಿಗುತ್ತಿದೆ ಎಂದು ಹೇಳಿದ ಆಳ್ವರ ದೇಶಾಭಿಮಾನ, ಮೇರುವ್ಯಕ್ತಿತ್ವ ಅವರದ್ದಾಗಿದೆ ಎಂದು ಹೇಳಿದರು.


ಮೊಗರ್ನಾಡು ಶ್ರೀಭಯಂಕೇಶ್ವರ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘನಾಥ ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


24-25 ಚಿಣ್ಣರ ಅಧ್ಯಕ್ಷೆ ದಿಯಾ ರಾವ್, ಬಿ.ಸಿ. ರೋಡಿನ ನ್ಯಾಯವಾದಿ ಮತ್ತು ನೋಟರಿ ಅಶ್ವನಿಕುಮಾರ್ ರೈ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸಂಸ್ಥೆಯ ಪ್ರಧಾನ ಸಂಚಾಲಕರಾದ ಮೋಹನದಾಸ್ ಕೊಟ್ಟಾರಿ ಮುನ್ನೂರು, ಕರಾವಳಿ ಉತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು, ಗೌರವ ಸಲಹೆಗಾರ ಸರಪಾಡಿ ಅಶೋಕ್ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ತಾರನಾಥ ಕೊಟ್ಟಾರಿ ತೇವು ಉಪಸ್ಥಿತರಿದ್ದರು.


ಬೂಡಾ ಮಾಜಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಸ್ವಾಗತಿಸಿದರು. ರಂಗಕಲಾವಿದ ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿ, ಪ್ರೇಮನಾಥ ಶೆಟ್ಟಿ ಅಂತರ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಿತು.

Post a Comment

0 Comments