ಮೂಡುಬಿದಿರೆಯಲ್ಲಿ 14 ನೇ ಅಂತಾರಾಷ್ಟ್ರೀಯ ಲೇಕ್ ಸಮ್ಮೇಳನ ಉದ್ಘಾಟನೆ
*ಪಶ್ಚಿಮ ಘಟ್ಟಗಳ ಉಳಿವಿಗೆ ಸರಕಾರದ ವಿಶೇಷ ಪ್ಯಾಕೇಜ್ ಅಗತ್ಯ : ಅನಂತ ಹೆಗ್ಡೆ ಆಶೀಸರ
ಮೂಡುಬಿದಿರೆ: ಪಶ್ಚಿಮ ಘಟ್ಟ ಪ್ರದೇಶ ಸಮಗ್ರ ದಕ್ಷಿಣ ಭಾರತದ ಜೀವನಾಧಾರವಾಗಿದೆ. ಇಂದು ನಮ್ಮಲ್ಲಿ ಅತಿವೃಷ್ಟಿ, ಜಲ ಪ್ರಳಯ, ಕೇರಳದ ಭೂಕುಸಿತ, ಉರಿಬಿಸಿಲಿನ ಸಂಕಷ್ಟ, ಒಣ ಭೂಮಿ ನಿಸರ್ಗ ನಿರ್ಲಕ್ಷ್ಯದ ಪರಿಣಾಮಗಳಾಗಿವೆ. ಆದರೂ ಅಲಲ್ಲಿ ನಿರಂತರ ಪರಿಸರಕ್ಕೆ ಮಾರಕವಾಗುವ ಬೆಳವಣಿಗೆಳಿಗೆ ಸರಕಾರವೂ ಹೊಣೆಯಾಗುತ್ತಿದೆ. ಹಸಿರು ಬಜೆಟ್, ಮಲೆನಾಡಿನ ಸುಸ್ತಿರ ಅಭಿವೃದ್ಧಿ ಸಹಿತ ಪಶ್ಚಿಮ ಘಟ್ಟಗಳ ಉಳಿವಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗಬೇಕಿದೆ ಎಂದು ವೃಕ್ಷ ರಕ್ಷ ಆಂದೋಲನದ ರೂವಾರಿ,ಕರ್ನಾಟಕ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ,ಪರಿಸರವಾದಿ ಅನಂತ ಹೆಗಡೆ ಅಶೀಸರ ಹೇಳಿದರು.
ಅವರು ಗುರುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ಎನರ್ಜಿ ಆ್ಯಂಡ್ ವೆಟ್ಲ್ಯಾಂಡ್ಸ್ ರಿಸರ್ಚ್ ಗ್ರೂಪ್, ಇವುಗಳ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಆರಂಭಗೊಂಡ ನಾಲ್ಕು ದಿನಗಳ ಲೇಕ್ ಅಂತಾರಾಷ್ಟ್ರೀಯ ದ್ಥೈವಾರ್ಷಿಕ ಸಮ್ಮೇಳನದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದರು.
ಭ್ರಷ್ಟಾಚಾರದ ಕೂಪವಾಗಿರುವ ಎತ್ತಿನ ಹೊಳೆ ಯೋಜನೆ ಸಹಿತ ಶರಾವತಿಯ ಹರಿವಿಗೆ ಮಾರಕವಾಗುವ ಯೋಜನೆಗಳಿಗೆ ಹಣ ವ್ಯರ್ಥ ಪೋಲಾಗುತ್ತಿದೆ. ಅನೇಕ ಪರಿಸರ ಅಧ್ಯಯನ ವರದಿಗಳು ಕಣ್ಣ ಮುಂದಿದ್ದರೂ ಸರಕಾರ ಅತ್ತ ಗಮನಿಸುತ್ತಿಲ್ಲ.
ಶಿವಮೊಗ್ಗದ ಸೊರಬದಲ್ಲಿ ಪಂಚಾಯತ್ ಮಟ್ಟದಲ್ಲಿ ಜೀವ ವೈವಿಧ್ಯ ಸಮಿತಿ ಯಶಸ್ಸು ಕಂಡ ಮಾದರಿ ನೀಡಿದ್ದೇವೆ, ಹೊಸನಗರ ಹೊಂಬುಜದಲ್ಲಿ ಗಣಿಗಾರಿಕೆ, ಸೋಂದಾ ಮುಂಡಿಗೆ ಕರೆ , ಕೋಲಾರದ ಅಂತರಗಂಗೆ, ಯಾದಗಿರಿಯ ಗೋಗಿ, ಶಿವಮೊಗ್ಗದ ಬಿ,ಹೆಚ್. ರಸ್ತೆ, ಕರಾವಳಿಯ ಅಳಿವೆಗಳ ಸಹಿತ ಪರಿಸರಕ್ಕೆ ಆತಂಕ ಮೂಡಿಸುವ ಘಟನೆಗಳು ಅಲಲ್ಲಿ ಕಾಣುತ್ತಿವೆ. ಮಲೆನಾಡಿನ ಕೆರೆಗಳ ಕುರಿತಂತೆ ಶ್ವೇತಪತ್ರ ಹೊರಡಿಸಬೇಕಾದ ಅನಿವಾರ್ಯತೆಯಿದೆ ಎಂದವರು ಹೆಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಮ್ಮೇಳನವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮಂಗಳೂರು ಎಸಿಎಫ್ ಆಂಟನಿ ಎಸ್. ಮರಿಯಪ್ಪ ಮಾತನಾಡಿ ರಾಜ್ಯದ 33 ಇಲಾಖೆಗಳು ಮಾನವನ ಅನುಕೂಲಕ್ಕಿದೆ. ಆದರೆ ಅರಣ್ಯ ಇಲಾಖೆ ಮಾನವ ಸಹಿತ ಎಲ್ಲ ಜೀವ ವೈವಿಧ್ಯಗಳ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ರಾಜ್ಯದ ಶೇ 21 ಪಾಲು ಅರಣ್ಯಗಳ ಪೈಕಿ ಶೇ 5 ಸಂರಕ್ಷಿತ ಅರಣ್ಯವಾಗಿದೆ. ಸುಸ್ಥಿರ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ವಿನಾಶಕ್ಕೆ ಒತ್ತು ನೀಡಿ ಪ್ರಾಕೃತಿಕ ವಿಸ್ಮಯಗಳೇ ಮರೆಯಾಗುತ್ತಿವೆ. ಪಶ್ಚಿಮ ಘಟ್ಟವೂ ಶೇ 40 ರಷ್ಟು ಹಾನಿಗೊಳಗಾಗಿದೆ. ಪರಿಸರ ಕಾಳಜಿಯ ಯುವ ಜನತೆಯೇ ನಮಗೆ ಮಾದರಿಯಾಗ ಬೇಕಿದ್ದು ನಿಜಾರ್ಥದ ಪರಿಸರ ಪ್ರೀತಿ ನಮ್ಮದಾಗಬೇಕಿದೆ ಎಂದರು.
ಕೆನಡಾದ ಪರಿಸರ ಚಿಂತಕ ಡಾ.ಸಿ. ರಾಜಶೇಖರ ಮೂರ್ತಿ,
ಪರಿಸರವಾದಿ ಡಾ.ಎಂ.ಡಿ. ಸುಭಾಸ್ ಚಂದ್ರನ್ ಮಾತನಾಡಿದರು.
ಡಾ.ಹರೀಶ ಕೃಷ್ಣ ಮೂರ್ತಿ , ಬಿಎಂ. ಕೃಷ್ಣ ಮೂರ್ತಿ, ಸಂಘಟನಾ ಕಾರ್ಯದರ್ಶಿ ಡಾ.ಎಸ್. ವಿನಯ್ ಉಪಸ್ಥಿತರಿದ್ದರು.
ಲೇಕ್ ಸಮ್ಮೇಳನ ಅಧ್ಯಕ್ಷ ವಿಜ್ಞಾನಿ ಡಾ ಟಿ ವಿ ರಾಮಚಂದ್ರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಅಗಲಿದ ಪರಿಸರ ಪ್ರೇಮಿಗಳಿಗೆ ನುಡಿನಮನ ಸಲ್ಲಿಸಿದರು. ಉಪನ್ಯಾಸಕ ರಾಜೇಶ್ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು.ಸಂಘಟನಾ ಕಾರ್ಯದರ್ಶಿ ಡಾ.ದತ್ತಾತ್ರೇಯ ವಂದಿಸಿದರು.
ದೇಶದ ವಿವಿಧ ಭಾಗಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು, ಪರಿಸರ ಹೋರಾಟಗಾರರು, ಹಾಗೂ ಸರಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದು ಐಐಟಿ, ಐಐಎಸ್ಸಿ, ಐಐಐಟಿ ಹಾಗೂ ಎನ್ಐಟಿಗಳಿಂದ ಸಂಶೋಧಕರು ಸೇರಿದಂತೆ, ಕೆನಡಾ, ರಷ್ಯಾ, ಸಿಂಗಪೂರ್ ಹಾಗೂ ನೇಪಾಳದವರಿಂದ ಪ್ರಬಂಧ ಮಂಡನೆ ನಡೆಯಲಿದೆ. ಮೂರು ದಿನಗಳ ಅವಧಿಯಲ್ಲಿ 11 ತಾಂತ್ರಿಕ ಅಧಿವೇಶನಗಳ ಜೊತೆಗೆ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ 7 ಗೋಷ್ಠಿಗಳು ನಡೆಯಲಿವೆ.
0 Comments