ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ, ಸನ್ಮಾನ
ಮೂಡುಬಿದಿರೆ: ಜನಸಾಮಾನ್ಯರಿಗೆ ಉಪಯುಕ್ತ ಹಾಗೂ ಸಮಾಜಕ್ಕೆ ಒಳಿತಾಗುವ ಕೆಲಸ ನಿರಂತರ ಮುಂದುವರೆಯಬೇಕು ಹಾಗೂ ಇಂತಹ ಉತ್ತಮ ವಿಷಯಗಳ ಬಗ್ಗೆ ಸಮಾಜಕ್ಕೆ ಬೆಳಕು ಚೆಲ್ಲುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು ಎಂದು ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್ ಹೇಳಿದರು.
ಅವರು ಮಂಗಳವಾರದಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ, ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ ಹಾಗೂ ಮಾನವೀಯತೆ ಮೆರೆದ ಬಸ್ ಸಿಬಂದಿಗಳಿಗೆ ಸಮ್ಮಾನ ನೆರವೇರಿಸಿ ಅವರು ಮಾತನಾಡಿದರು.
ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಲಹೆಗಳು ಪತ್ರಿಕೆಗಳಿಂದ ನಿರೀಕ್ಷಿಸಲಾಗುತ್ತಿದೆ. ಬಸ್ ಸಿಬಂದಿಗಳ ಮಾನವೀಯ ಕಾರ್ಯಗಳು ಇತರರಿಗೂ ಮಾದರಿ ಎಂದು
ಮಂಗಳೂರು ನಗರದಲ್ಲಿ ಅನೇಕ ಸಮಸ್ಯೆಗಳಿವೆ. ರಸ್ತೆ ಅಗೆಯುವುದು, ಅಲ್ಲಲ್ಲಿ ಹೊಂಡ ಗುಂಡಿಗಳು, ವಾಹನ ದಟ್ಟನೆ ಇತ್ಯಾದಿ ಸಮಸ್ಯೆಯ ನಡುವೆಯೂ ಸಂಚಾರ ನಿಭಾಯಿಸಲು ಸಾರ್ವಜನಿಕರು ಸಹಕಾರ ನೀಡುತ್ತಿರುವುದು ಅಪೇಕ್ಷಿತ ಎಂದು ಹೇಳಿದರು.
ಮಂಗಳೂರು ಆರ್ಟಿಒ ಶ್ರೀಧರ್ ಮಲ್ಲಾಡ್ ಮಾತನಾಡಿ, ಬಸ್ ಮಾಲಕರು ಸಾರಿಗೆ ಇಲಾಖೆಗೆ ಪ್ರತೀ ತಿಂಗಳು ಎರಡುವರೆ ಕೋಟಿ ರೂ. ತೆರಿಗೆ ಕಟ್ಟುತ್ತಿದ್ದು, ನಗರದಲ್ಲಿ ಎರಡನೇ ಅತ್ಯಧಿಕ ತೆರಿಗೆ ಪಾವತಿದಾರರಾಗಿದ್ದಾರೆ. ಇಲಾಖೆಯೊಂದಿಗೆ ಪ್ರಾಮಾಣಿಕವಾಗಿ ವರ್ತಿಸುವ ಜತೆಗೆ ಬಸ್ಗಳಲ್ಲಿನ ಸಿಬಂದಿಗಳ ಮಾನವೀಯ ಕಾರ್ಯಗಳು ಸಮಾಜಕ್ಕೆ ಆದರ್ಶ ಎಂದರು.
ಸಂಚಾರ ವಿಭಾಗದ ಎಸಿಪಿ ನಜ್ಮಾ ರೂಕ್ ಮಾತನಾಡಿ, ಮಂಗಳೂರಿನ ಖಾಸಗಿ ಬಸ್ನವರು ಡಿಜಿಟಲ್ ಇಂಡಿಯಾಕ್ಕೆ ಚಾಲನೆ ನೀಡುವ ಮೂಲಕ ರಾಜ್ಯದಲ್ಲೇ ಮೊದಲ ಪ್ರಯತ್ನ ಮಾಡಿದ್ದಾರೆ. ಅದರ ಜತೆಗೆ ಮಾದ್ಯಮದವರ ಆಗತ್ಯತೆಗೆ ಬಸ್ ಮಾಲಕರು ನೆರವಾಗಿದ್ದಾರೆ. ಬಸ್ ಪಾಸ್ ಪತ್ರಕರ್ತರಿಗೆ ಉಪಯುಕ್ತವಾಗಲಿದೆ ಎಂದರು.
ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಮಾತನಾಡಿ, ವಿಶ್ವದಲ್ಲೇ ಮಾನವ ಹಕ್ಕು ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ರಚನಾತ್ಮ ಕೆಲಸ ಮಾದ್ಯಮ ನಿರ್ವಹಿಸುತ್ತಿದೆ. ಜಿಲ್ಲೆಯ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ ಸೌಕರ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳತ್ತ ಪತ್ರಕರ್ತರು ಬೆಳಕು ಚೆಲ್ಲಬೇಕಿದೆ. ಸಾರಿಗೆ ವ್ಯವಸ್ಥೆಯನ್ನು ಎಚ್ಚರಿಸುವ ಜತೆಗೆ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದು ಅಭಿನಂದನೀಯ ಎಂದರು.
ಸಮಾರಂಭದಲ್ಲಿ ಪತ್ರಕರ್ತರಿಗೆ ಖಾಸಗಿ ಬಸ್ ಮಾಲಕ ಸಂಘದ ವತಿಯಿಂದ ಪಾಸ್ ವಿತರಿಸಲಾಯಿತು.
ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.
0 Comments