ಮೂಡುಬಿದಿರೆಯಲ್ಲಿ ಮೊದಲ ಕಾನೂನು ಕಾಲೇಜು
*ಆ.10ರಂದು ಶಿರ್ತಾಡಿಯ ಭುವನಜ್ಯೋತಿ ಕಾನೂನು ಕಾಲೇಜು ಉದ್ಘಾಟನೆ
ಮೂಡುಬಿದಿರೆ: ತಾಲೂಕಿನಲ್ಲಿ ಮೊದಲ ಕಾನೂನು ಕಾಲೇಜು ಆರಂಭಗೊಳ್ಳಲಿದ್ದು, ಕರ್ನಾಟಕ ರಾಜ್ಯ ಕಾನೂನು ಮಹಾ ವಿದ್ಯಾಲಯ ಮತ್ತು ಭಾರತೀಯ ಬಾರ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರುವ ಶಿರ್ತಾಡಿಯ ಭುವನಜ್ಯೋತಿ ಕಾನೂನು ವಿದ್ಯಾಲಯವು ಆ.10 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಭುವನಜ್ಯೋತಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಆರ್.ಪ್ರಶಾಂತ್ ಡಿಸೋಜ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಆಂದ್ರಪ್ರದೇಶದ ರಾಜ್ಯಪಾಲರಾದ ಅಬ್ದುಲ್ ನಝೀರ್ ಅವರು ನೂತನ ಕಾನೂನು ವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಕೃಷ್ಣ ಎಸ್.ದೀಕ್ಷಿತ್, ಕರ್ನಾಟಕ ರಾಜ್ಯ ಕಾನೂನು ವಿ.ವಿ.ಹುಬ್ಬಳ್ಳಿ ಇದರ ಉಪಕುಲಪತಿ ಡಾ.ಸಿ.ಬಸವರಾಜು, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷರಾದ ವಿಶಾಲರಘು ಎಚ್ಎಲ್ ಹಾಗೂ ದ.ಕ.ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ರವೀಂದ್ರ ಎಂ.ಜೋಶಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು.
ಮೂಡುಬಿದಿರೆ ತಾಲೂಕಿನಲ್ಲಿ ಪ್ರಪ್ರಥಮ ಕಾನೂನು ಕಾಲೇಜು ಇದಾಗಿದ್ದು ಈಗಾಗಲೇ ಐದು ವರ್ಷದ ಕೋರ್ಸ್ ಗೆ ಸ್ಥಳೀಯ ಹಾಗೂ ಆಸುಪಾಸಿನ 25 ಮಂದಿ ವಿದ್ಯಾರ್ಥಿಗಳ ದಾಖಲಾತಿಯಾಗಿದ್ದು ಮೂರು ವರ್ಷಗಳ ಕೋರ್ಸನ್ನು ಆಗಸ್ಟ್ 28 ರ ನಂತರ ಪ್ರಾಂಭಿಸಲಾಗುವುದು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರದೀಪ್ ಎಂ.ಡಿ. ಅವರು ಮಾತನಾಡಿ ಕಾಲೇಜಿನಲ್ಲಿರುವ ಸೌಲಭ್ಯಗಳು, ಮುಂದಿನ ಯೋಜನೆಗಳ ಕುರಿತಾಗಿ ಮಾಹಿತಿ ನೀಡಿದರು.
ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪ್ರಭು,ಸಂಚಾಲಕರಾದ ಪ್ರಶಾಂತ್ ಎನ್, ಖಜಾಂಚಿ ಲತಾ ಎ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments