ಜು.೨೭ ಮೂಡುಬಿದಿರೆಯಲ್ಲಿ ಯಕ್ಷ ಸಂಭ್ರಮ ೨೦೨೪
ಮೂಡುಬಿದಿರೆ : ಬೆಳುವಾಯಿಯ ಯಕ್ಷದೇವ ಮಿತ್ರಕಲಾ ಮಂಡಳಿಯ ೨೭ನೇ ವರ್ಷದ `ಯಕ್ಷಸಂಭ್ರಮ ೨೦೨೪' ಜು.೨೭ರಂದು ಮಧ್ಯಾಹ್ನ ೧:೩೦ರಿಂದ ಪ್ರೀತಂ ಗಾರ್ಡನ್ನಲ್ಲಿ ನಡೆಯಲಿದೆ.
ಮಂಡಳಿಯ ಅಧ್ಯಕ್ಷ ದೇವಾನಂದ ಭಟ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಸಾರಿಗೆ ಉದ್ಯಮಿ ನಾರಾಯಣ ಪಿ.ಎಂ ಉದ್ಘಾಟಿಸಲಿದ್ದು ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೨ ಗಂಟೆಗೆ ಪ್ರಸಿದ್ಧ ಕಲಾವಿದರಿಂದ ತೆಂಕು, ಬಡಗು ಕೂಡಾಟ `ವೀರ ವೈಷ್ಣವ' ನಡೆಯಲಿದೆ. ೪:೩೦ಕ್ಕೆ ಸಮಾರೋಪ ಮತ್ತು ಹಿರಿಯ ಮದ್ದಳೆವಾದಕ ನಾರಾಯಣ ಭಟ್ ಪೆರುವಾಯಿ, ರಾಮಕುಲಾಲ್ ದಾಸನಡ್ಕ ಅವರಿಗೆ ಯಕ್ಷದೇವ ಪ್ರಶಸ್ತಿ, ನಿವೃತ್ತ ಶಿಕ್ಷಕಿ, ಕಲಾವಿದೆ ಕೆ. ಕಲಾವತಿ ಸುರತ್ಕಲ್ ಅವರಿಗೆ ವನಜಾಕ್ಷಿಯಮ್ಮ ಸಂಸ್ಮರಣಾ ಪ್ರಶಸ್ತಿ ಪ್ರದಾನ ನಡೆಯಲಿದೆ.
ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಉಮನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್ ಸಹಿತ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ೭ರಿಂದ ವಿಶೇಷ ಸಂಯೋಜನೆಯಲ್ಲಿ `ನವರಸ ರಾಮಾಯಣ' ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್, ಗೌರವ ಸಲಹೆಗಾರ ಚಂದ್ರಶೇಖರ ರಾವ್, ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ ಉಪಸ್ಥಿತರಿದ್ದರು.
0 Comments