ಜನಪ್ರಿಯತೆಗೆ ಸತತ ಪ್ರಯತ್ನ ಅಗತ್ಯ : ಅಜಿತ್ ಹನುಮಕ್ಕರ್
ಮೂಡುಬಿದಿರೆ: ಜನಪ್ರಿಯತೆಗೆ ಸರಳ ಮಾರ್ಗವಿದೆ, ಆದರೆ ಸಾಧನೆಗಲ್ಲ. ಸಾಧನೆ ಸತತ ಪ್ರಯತ್ನದ ಫಲ ಎಂದು ಖಾಸಗಿ ಸುದ್ಧಿವಾಹಿನಿಯ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ್ ಹೇಳಿದರು.
ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಮೂಡುಬಿದಿರೆಯ ಭಾರತ್ ಸೈಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯ ನೆಲೆಯಲ್ಲಿ ಮಾತನಾಡಿದರು.
ನಿಮ್ಮನ್ನು ಕರೆಯುತ್ತಿರುವ ಜಗತ್ತಿಗೆ ತಯಾರಾಗಿ, ಬರೀ ಪರೀಕ್ಷೆಗಳಿಗಲ್ಲ. ಶಿಕ್ಷಣದ ಪ್ರತಿ ಹಂತವು ಪ್ರಮುಖವಾದರೂ, ಶಿಕ್ಷಣ ಮುಗಿಸಿ ನಾವು ಸಾಗುವ ವೃತ್ತಿ ಕ್ಷೇತ್ರದಲ್ಲಿನ ನಮ್ಮಕ್ಷಮತೆ ನಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಹಾಗಾಗಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂತುಎಂದಾಗ ಹೆಚ್ಚಿನ ಆತ್ಮವಿಶ್ವಾಸವೂ ಬೇಡ, ಕಡಿಮೆ ಬಂತೆಂದು ಕುಗ್ಗುವಿಕೆಯು ಸಲ್ಲ. ಬಯಸುತ್ತಾರೆ. ಜೀವನ ಎಂದಿಗೂ ಒಂದೇ ದಿನಕ್ಕೆ ಕಾಯುವಂತಿರಬಾರದು. ಪ್ರತಿಯೊಂದು ದಿನವೂ ನಮಗೆ ಅತೀ ಮುಖ್ಯ. ಸಣ್ಣ ಕನಸ್ಸನ್ನು ಇಟ್ಟು, ಒಂದೊಂದೇ ಮೆಟ್ಟಿಲೇರುವುದು, ದೊಡ್ಡ ಕನಸಿಗಿಂತ ಉತ್ತಮ. ನಾವೆಲ್ಲರೂ ತಯಾರಾಗಬೇಕಾಗಿರುವುದು ಪರೀಕ್ಷೆಗಳಿಗೆ ಮಾತ್ರವಲ್ಲ, ನೆನಪಿರಲಿ ಬದುಕಿಗಾಗಿ. ಅಂತಹ ನಾಳೆಯ ಬದುಕಿಗಾಗಿ ವಿದ್ಯಾರ್ಥಿಗಳನ್ನು ತಯಾರುಗೊಳಿಸುವಲ್ಲಿ ಆಳ್ವಾಸ್ ವಿದ್ಯಾಸಂಸ್ಥೆ ಮುಂಚೂಣಿಯಲ್ಲಿದೆ.
ಆಳ್ವಾಸ್ ಕಾಲೇಜಿನ ಪ್ರಾಚಾರ್ಯಡಾ. ಕುರಿಯನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬದುಕಿನಲಿ ಸ್ವಯಂ ನಿಯಂತ್ರಣವೆಂಬುದು ಮುಖ್ಯ.ಯಾವ ವ್ಯಕ್ತಿ ಸ್ವಯಂ ನಿಯಂತ್ರಣ ಸಾಧಿಸುತ್ತಾನೋ ಅವನು ಬದುಕಿನ ಸಫಲತೆಯ ಮಾರ್ಗದಲ್ಲಿ ಸಾಗಲು ಸಾಧ್ಯ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್, ಶಿಕ್ಷಣ ಸಂಸ್ಥೆ ಕಲಿಸಿದ ಪಠ್ಯವನ್ನು ನಾವು ಮರೆಯಬಹುದು, ಆದರೆ ಶಿಕ್ಷಣದ ಹಂತದಲ್ಲಿ ಕಲಿತ ಜೀವನ ಪಾಠ ನಮ್ಮನ್ನು ಯಶಸ್ಸಿನೆಡೆಗೆ ಒಯ್ಯಬಲ್ಲದು ಎಂದರು.
ಮುಖ್ಯ ಅತಿಥಿ ಅಜಿತ್ ಹನಮಕ್ಕನವರ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಾಂಸ್ಕೃತಿಕ, ಕ್ರೀಡೆ ಹಾಗೂ ಶೈಕ್ಷಣಿಕ ವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಮತ್ತು ಆಳ್ವಾಸ್ ಪದವಿ ಪೂರ್ವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಮ್. ಡಿ, ಪದವಿ ಪೂರ್ವ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.
ಪದವಿ ಪೂರ್ವ ವಿಭಾಗದ ಕನ್ನಡ ಉಪನ್ಯಾಸಕ ಟಿ. ಎನ್ ಖಂಡಿಗೆ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಶಾಲೆಟ್ ಮೊನಿಸ್ ಸ್ವಾಗತಿಸಿದರು. ಉಪನ್ಯಾಸಕಿ ರುಚಿಕಾ ವಂದಿಸಿದರು.
0 Comments