ಶಂಕುಸ್ಥಾಪನೆ ನಳಿನ್ ಮಾಡಿದ್ದಾರೆ, ಉದ್ಘಾಟನೆನೂ ಅವರೇ ಮಾಡ್ತಾರೆ:ಕುತೂಹಲ ಮೂಡಿಸಿದ ಡಾ.ಪ್ರಭಾಕರ್ ಭಟ್ ಹೇಳಿಕೆ
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿರುವ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಪ್ರಭಾಕರ್ ಭಟ್ ಕಲ್ಲಡ್ಕರವರ ಹೇಳಿಕೆ ತೀವ್ರ ಕುತೂಹಲ ಸೃಷ್ಟಿಸಿದೆ.
ಪುತ್ತೂರು ವಿವೇಕಾನಂದ ಕಾಲೇಜಿನ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಇಂದು ಸಂಸದ ನಳಿನ್ ಕುಮಾರ್ ಕಟೀಲುರವರು ಶಂಕುಸ್ಥಾಪನೆ ನೆರವೇರಿಸಿ ವಿವೇಕಾನಂದ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪ್ರಭಾಕರ್ ಭಟ್ "ಇಂದು ಸಂಸದ ನಳಿನ್ ಕುಮಾರ್ ಕಟೀಲು ರೈಲು ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬಹುಕಾಲದ ಬೇಡಿಕೆ ಇದೆ. ಸೂಕ್ತ ಸಮಯದಲ್ಲಿ ಇದರ ಹಿಂದೆ ಬಿದ್ದು ಕೆಲಸ ಮಾಡಿದ ಸಂಸದರಿಗೆ ಅಭಿನಂದನೆಗಳು. ಶಂಕುಸ್ಥಾಪನೆಯನ್ನು ನಳಿನ್ ಕುಮಾರ್ ಕಟೀಲು ಮಾಡಿದ್ದಾರೆ, ಇದರ ಕಾಮಗಾರಿ ನಡೆದು ಉದ್ಘಾಟನೆಯನ್ನೂ ಇವರೇ ಮಾಡುತ್ತಾರೆ" ಎಂದು ಹೇಳಿದರು.
ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದ್ದು ಆರೆಸ್ಸೆಸ್ ಮುಖಂಡರ ಈ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದೆ.
0 Comments