ಭೂಮಿ ಹಕ್ಕಿಗೆ ಒತ್ತಾಯಿಸಿ ಸೆ.25ರಂದು ಅಹೋರಾತ್ರಿ ಧರಣಿ
ಮೂಡುಬಿದಿರೆ: ಸರ್ಕಾರಿ ಭೂಮಿಯಲ್ಲಿ ಮನೆಕಟ್ಟಿ ಕುಳಿತು ಕೃಷಿ ಮಾಡುತ್ತಿರುವ ಕುಟುಂಬಕ್ಕೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿ ಭೂಮಿ ಹೋರಾಟ ಸಮಿತಿ ವತಿಯಿಂದ 25ರಂದು ಬೆಳಿಗ್ಗೆ 10ರಿಂದ ಅಹೋರಾತ್ರಿ ಧರಣಿ ನಡೆಯಲಿದೆ ಎಂದು ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರು ಶನಿವಾರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಇರುವೈಲು, ತೋಡಾರು, ಪುತ್ತಿಗೆ, ಬೆಳುವಾಯಿ, ಶಿರ್ತಾಡಿ, ಪಾಲಡ್ಕ ಇನ್ನಿತರ ಪ್ರದೇಶಗಳಲ್ಲಿ ಸರಕಾರಿ ಸ್ಥಳದಲ್ಲಿ ಮನೆಕಟ್ಟಿಕೊಂಡು ವಾಸವಿದ್ದು ಸಣ್ಣಪುಟ್ಟ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅನೇಕ ವರ್ಷಗಳಿಂದ ಅರ್ಜಿ ಪಡೆದಿದ್ದರೂ ಇನ್ನೂ ಭೂಮಿ ಹಕ್ಕು ಸಿಕ್ಕಿಲ್ಲ. ತಾಲೂಕಿನಲ್ಲಿ 94 ಸಿ, 94 ಸಿಸಿ, ಫಾರಂ ನಂ 50, 53, 57 ರಲ್ಲಿ ಸಲ್ಲಿಸಿದ ಅರ್ಜಿಗಳು ಡೀಮ್ಡ್ ಫಾರೆಸ್ಟ್ ಎಂದು ತಿರಸ್ಕರಿಸಿದ್ದು ಅರ್ಜಿಗಳಿಗೆ ತಾರ್ಕಿಕ ಅಂತ್ಯ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳ ಗಮನ ಸೆಳೆಯಲು ಈ ಧರಣಿ ನಡೆಸಲಾಗುವುದು. ಅರ್ಜಿ ಸಲ್ಲಿಸಿದವರು ಪಾಲ್ಗೊಳ್ಳಬೇಕು ಎಂದರು.
ಹೋರಾಟ ಸಮಿತಿಯ ಕಾರ್ಯದರ್ಶಿ ಆನಂದ ಪೂಜಾರಿ, ಉಪಾಧ್ಯಕ್ಷ ಶೀನ ನಾಯ್ಕ್, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸುಂದರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.
0 Comments