ಧಾರ್ಮಿಕ ಮುಂದಾಳು ಕೊಡ್ಯಡ್ಕ ರಘುರಾಮ ಹೆಗ್ಡೆ ನಿಧನ
ಮೂಡುಬಿದಿರೆ:ಧಾರ್ಮಿಕ ಮುಂದಾಳು, ಸಂಘಟಕ ಕೊಡ್ಯಡ್ಕ ರಘುರಾಮ ಹೆಗ್ಡೆ(84) ಅನಾರೋಗ್ಯದಿಂದಾಗಿ ಬುಧವಾರ ಮೂಡುಬಿದಿರೆಯ ಗಾಂಧಿನಗರದ 'ಕಲಾಕುಂಜ' ನಿವಾಸದಲ್ಲಿ ನಿಧನರಾದರು.
ಬಿ.ಇ ಪದವೀಧರರಾಗಿದ್ದ ಅವರು ಮುಂಬಯಿಯಲ್ಲಿ ಹಿಂದೂಸ್ತಾನ್ ಕನ್ ಸ್ಟಕ್ಷನ್ ಕಂಪೆನಿಯಲ್ಲಿ ಸುಮಾರು 15 ವರ್ಷ ಕೆಲಸ ಮಾಡಿದ್ದರು. ನಂತರ ವಿದೇಶಕ್ಕೆ ತೆರಳಿ ಇರಾನಲ್ಲಿ ಕಿರ್ಬಿ ಕನ್ ಸ್ಟ್ರ ಕ್ಷನ್ ಕಂಪೆನಿಯಲ್ಲಿ 5 ವರ್ಷ ನಂತರ ಕುವೈಟ್ ನಲ್ಲಿರುವ ಅದೇ ಕಂಪೆನಿಯಲ್ಲಿ ಸುಮಾರು 5 ವರ್ಷ ಕೆಲಸ ಮಾಡಿ ಬಳಿಕ ಊರಿಗೆ ಮರಳಿದ್ದರು. ಮುಂಬಯಿ ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಎರಡು ಅವಧಿಗೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿಯು ಕಾರ್ಯನಿರ್ವಹಿಸಿದ್ದು ದೇವಳದಲ್ಲಿ ಅನೇಕ ಅಭಿವ್ರದ್ಧಿ ಕಾರ್ಯಗಳನ್ನು ನಡೆಸಿದ್ದರು. ದೇವಸ್ಥಾನದ ಆದಾಯ ಕ್ರೋಢೀಕರಣಕ್ಕೆ ಪೋಷಕ ದಂಪತಿ ಹಾಗೂ ನಿರಖು ಠೇವಣಿ ಸೇವಾ ಯೋಜನೆಯನ್ನು ಜಾರಿಗೆ ತಂದಿದ್ದರು. ಕೊಡ್ಯಡ್ಕ ಹೊಸನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ವ್ಯವಸ್ಥೆಯನ್ನು ಹಲವು ವರ್ಷ ನೋಡಿಕೊಂಡಿದ್ದರು. ಅವರಿಗೆ ಪತ್ನಿ ಕಲಾವತಿ ಆರ್. ಹೆಗ್ಡೆ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
0 Comments