ಮೂಡುಬಿದಿರೆ: ಜಾತ್ಯಾತೀತ ಜನತಾದಳ ಮೂಡುಬಿದಿರೆ ತಾಲೂಕು ಮಟ್ಟದ ಕಾರ್ಯಕರ್ತರ ಸಭೆಯು ಮೂಡುಬಿದಿರೆ ಜನತಾದಳ ಕಚೇರಿಯಲ್ಲಿ ಇಂದು ನಡೆಯಿತು.
ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಮಾತನಾಡಿ ಪಕ್ಷವನ್ನು ಪುನಶ್ಚೇತನಗೊಳಿಸಿ ಶಕ್ತಿ ಪ್ರದರ್ಶನ ಮಾಡಲು ತಯಾರಾಗಬೇಕು. ನಂತರ ಮುಖಂಡರಾದ ದೇವೇಗೌಡ, ಕುಮಾರಸ್ವಾಮಿಯವರನ್ನು ಕರೆಯಿಸಿ ಕಾರ್ಯಕರ್ತರ ಮತ್ತು ಅಮರನಾಥ ಶೆಟ್ಟಿಯವರ ಅಭಿಮಾನಿಗಳ ಸಭೆ ನಡೆಸುವಂತೆ ತಿಳಿಸಿದರು.
ಜಿಲ್ಲಾಧ್ಯಕ್ಷ ಜಾಕೆ ಮಾಧವಗೌಡ ಮಾತನಾಡಿ ಮೂಡುಬಿದಿರೆಯಲ್ಲಿ ವಿಧಾನಸಭಾ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಪ್ರತೀ ಮನೆ ಮನೆಯಲ್ಲೂ ಇರುವ ಪಕ್ಷದ ಅಭಿಮಾನಿಗಳು ಮತದಾರರ ಮನವೊಲಿಸುವ ಕಾರ್ಯಗಳಾಗಬೇಕು ಎಂದು ಅಭಿಪ್ರಾಯಪಟ್ಟರು.
ಪಕ್ಷದ ರಾಜ್ಯ ಕಾರ್ಯದರ್ಶಿ ತೋಡಾರು ದಿವಾಕರ ಶೆಟ್ಟಿ ಮಾತನಾಡಿ ಜನತಾದಳ ರಾಜ್ಯದಲ್ಲಿ ಅಧಿಕಾರ ನಡೆಸಿ ಜನಪರವಾದ ಯೋಜನೆಗಳನ್ನು ನೀಡಿ ಜನಪ್ರಿಯಗೊಂಡಿದೆ. ಆದರೆ ಪಕ್ಷ ನಾಯಕರ ಉದಾಸೀನತೆಯಿಂದ ಕಾರ್ಯಕರ್ತರು ಮುನಿಸುವಂತಾಗಿದೆ. ಅದನ್ನು ಸರಿಪಡಿಸಿ ಮತ್ತೆ ಪಕ್ಷವನ್ನು ಸಂಘಟಿಸಬೇಕಾಗಿದೆ ಎಂದು ಹೇಳಿದರು.
ದಿ| ಅಮರನಾಥ ಶೆಟ್ಟಿಯವರ ಪುತ್ರಿ ಡಾ.ಅಮರಶ್ರೀ ಮಾತನಾಡಿ ಪಕ್ಷ ಸಂಘಟನೆ ನಡೆಸಿ ನಂತರ ಚುನಾವಣೆಯತ್ತ ಮುಖ ಮಾಡುವಂತೆ ಸಲಹೆ ನೀಡಿದರು.
ಮೂಡುಬಿದಿರೆಯಲ್ಲಿ ಶಾಸಕರಾಗಿ ರಾಜ್ಯದಲ್ಲಿ ಸಚಿವರಾಗಿ ಜನಮಾನ್ಯತೆ ಪಡೆದುಕೊಂಡಿದ್ದ ದಿ| ಅಮರನಾಥ ಶೆಟ್ಟಿಯವರ ಕಾರ್ಯಶೈಲಿ ಹಾಗೂ ಪಕ್ಷದ ಮೇಲಿನ ಅಭಿಮಾನವನ್ನು ಬಳಕೆ ಮಾಡಿಕೊಂಡು ಚುನಾವಣೆ ಎದುರಿಸುವ ಕುರಿತು ಪಕ್ಷ ನಾಯಕರು ಮತ್ತು ಕಾರ್ಯಕರ್ತರು ಚರ್ಚಿಸಿದರು.
0 Comments