ಮೂಡುಬಿದಿರೆ: ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಡಿ. 21ರಿಂದ 27 ರವರೆಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದು ದೇಶ ವಿದೇಶಗಳ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 10 ಸಾವಿರ ಶಿಕ್ಷಕರು, 3000 ಸ್ವಯಂ ಸೇವಕರು ಹಾಗೂ 1000ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ ಮಾಹಿತಿ ನೀಡಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಾಂಬೂರಿಯಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಕೃಷಿ ಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಮಸ್ತಕ ಮೇಳ ಮತ್ತು ಸ್ವದೇಶಿ ಮೇಳಗಳು ನಡೆಯಲಿವೆ. 7 ಎಕರೆ ಪ್ರದೇಶದಲ್ಲಿ 42 ಬಗೆಯ ಸಾಹಸ ಕಸರತ್ತುಗಳು ನಡೆಯಲಿವೆ. 12 ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು, ತರಕಾರಿ ಬೆಳೆಗಳು, ವೈವಿಧ್ಯಮಯ ಭತ್ತದ ತಳಿಗಳನ್ನು ಬೆಳೆಸಲಾಗಿದೆ. ಬೃಹತ್ ಪುಷ್ಪ ಪ್ರದರ್ಶನ, ಸುಡುಮದ್ದು ಪ್ರದರ್ಶನ ನಡೆಯಲಿದೆ. ಡಿಆರ್ಡಿಒ, ಇಸ್ರೋ ಸಂಸ್ಥೆಗಳ ಸಹಕಾರ ದೊಂದಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಕೆರಳಿಸುವ ಹಲವಾರು ಮಾದರಿಗಳ ಪ್ರದರ್ಶನಗಳಿವೆ. ಮಸ್ತಕ ಮೇಳದಲ್ಲಿ ರಾಷ್ಟ್ರ -ಅಂತಾರಾಷ್ಟ್ರೀಯ ಮಟ್ಟದ ಪುಸ್ತಕಗಳ ಪ್ರದರ್ಶನ, ಮಾರಾಟವಿದೆ. ಸಾರ್ವ ಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.
ಜನಪದ, ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಕಲೆಗೆ ಒತ್ತು ನೀಡಿದ್ದು, ಕಲ್ಲು ಮಣ್ಣು, ಮರ, ಲೋಹ, ಶಿಲ್ಪ ಕಲಾವಿದರು ಸ್ಥಳದಲ್ಲಿಯೇ ಶಿಲ್ಪಕಲಾಕೃತಿಗಳನ್ನು ರಚಿಸಲಿದ್ದಾರೆ.
ಅಲ್ಲದೆ ಖ್ಯಾತ ವ್ಯಂಗ್ಯ ಚಿತ್ರಕಾರರು, ದೇಶ-ವಿದೇಶದ ಛಾಯಾಚಿತ್ರ ಗ್ರಾಹಕರ ಚಿತ್ರಗಳು
ಪ್ರದರ್ಶನಗೊಳ್ಳಲಿವೆ. ಈಗಾಗಲೇ ನಡೆದ ಛಾಯಾ ಚಿತ್ರ ಸ್ಪರ್ಧೆಗೆ 9 ಸಾವಿರದಷ್ಟು ಕಲಾಕೃತಿಗಳು ಬಂದಿದ್ದು, ಈ ಪೈಕಿ ಆಯ್ದ 300 ಚಿತ್ರಗಳನ್ನು ಪ್ರದರ್ಶಿಸಲಾಗುವುದು, ಕೋಲ್ಕತ್ತಾದ 30 ಬೀದಿ ಕಲಾವಿದರು ಜಾದೂ ಪ್ರದರ್ಶನ ಅಲ್ಲದೆ 30 ಶ್ರೇಷ್ಠ ಜಾದೂಗಾರರೂ ಜಾದೂ ಪ್ರದರ್ಶನ ನೀಡಲಿದ್ದಾರೆ.
ಸಾವಿರಕ್ಕೂ ಅಧಿಕ ಗಾಳಿಪಟಗಳ ಪ್ರದರ್ಶನ, ಗೊಂಬೆಯಾಟವೂ ನಡೆಯಲಿದೆ. ವಿದ್ಯಾಗಿರಿ ಕ್ಯಾಂಪಸ್ಗೆ ಹೊಂದಿಕೊಂಡಿರುವ 10 ಎಕರೆ ಖಾಸಗಿ ಸ್ಥಳದಲ್ಲಿ ಸಹಜ ಅರಣ್ಯ ಪ್ರದೇಶವಿದ್ದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪ್ರಾಣಿ ಪಕ್ಷಿಗಳ ಕಲರವದ ನೈಜತೆಯೊಂದಿಗೆ ಅರಣ್ಯ ಪರಿಚಯಿಸುವ ಕೆಲಸ ನಡೆಯಲಿದೆ.
ಏಕಕಾಲಕ್ಕೆ ಧ್ಯಾನ ಯೋಗಾಸನ-ಸುಮಾರು 50 ಸಾವಿರ ಮಂದಿ ಕುಳಿತುಕೊಳ್ಳ ಬಹುದಾದ ಬೃಹತ್ ಬಯಲು ರಂಗಮಂಟಪ, ವೇದಿಕೆ ನಿರ್ಮಿಸಲಾಗಿದೆ. ಪ್ರಮುಖ ಕಾರ್ಯ ಕ್ರಮಗಳು ಇಲ್ಲಿ ನಡೆಯಲಿದ್ದು 50 ಸಾವಿರ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಯೋಗ ಮತ್ತು ಧ್ಯಾನ ನಡೆಯಲಿದೆ. ಖ್ಯಾತ ಸಂಗೀತ ಕಲಾವಿದ ಶಂಕರ ಮಹದೇವನ್, ವಿಜಯ್ ಪ್ರಕಾಶ್ ಸೇರಿದಂತೆ ಖ್ಯಾತ ಸಂಗೀತ ಕಲಾವಿದರ ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿವೆ.
ಪ್ರತಿನಿತ್ಯ 2 ಲಕ್ಷ ಮಂದಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದ್ದು ಒಟ್ಟು ಸುಮಾರು 35 ಕೋಟಿ ರೂ. ಖರ್ಚಾಗಲಿದೆ. ಸರಕಾರದಿಂದ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಸಾರ್ವಜನಿಕರು ದೇಣಿಗೆ ಅಥವಾ ಹೊರೆ ಕಾಣಿಕೆ ಮೂಲಕ ವಸ್ತು ರೂಪದಲ್ಲಿ ಸಹಕರಿಸುವಂತೆ ತಿಳಿಸಿದರು.
0 Comments