ಬಜ್ಪೆ ಬುಲ್ಸ್ ನ ಪರಸಪ್ಪ ಮ್ಯಾನ್ ಆಫ್ ದಿ ಮ್ಯಾಚ್, ಪ್ರೇಮ್ ಅವರು ಸರಣಿ ಶ್ರೇಷ್ಠ ಮತ್ತು ಅತ್ಯುತ್ತಮ ದಾಂಡಿಗನಾಗಿ , ಮೂಡುಬಿದಿರೆ ಸೂಪರ್ ಕಾಪ್ಸ್ ನ ಅಖಿಲ್ ಅತ್ಯುತ್ತಮ ಎಸೆತಗಾರನಾಗಿ ಮೂಡಿ ಬಂದಿದ್ದಾರೆ.
ಸಂಜೆ ನಡೆದ ಸಮಾರೋಪ ಸಮಾರಭದಲ್ಲಿ ಪುರಸಭಾದ್ಯಕ್ಷ ಪ್ರಸಾದ್ ಕುಮಾರ್ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿ ಗೆಲುವೇ ಬದುಕಲ್ಲ ಸೋಲು ಬದುಕಿನ ಕೊನೆಯಲ್ಲ. ಪೊಲೀಸರು ರಾತ್ರಿ-ಹಗಲು, ಹಬ್ಬ ಹರಿದಿನಗಳೆನ್ನದೆ ಜನರ ರಕ್ಷಣೆಯ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ. ಹಾಗಾಗಿ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮನೋರಂಜನೆಗಾಗಿ ವರುಷದಲ್ಲಿ ಒಂದೆರಡು ಬಾರಿಯಾದರೂ ಸೌಹಾರ್ದಯುತ ಕ್ರೀಡಾಕೂಟಗಳು ನಡೆದರೆ ಪೊಲೀಸರಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಕ್ರೀಡಾಕೂಟದಿಂದ ಪೊಲೀಸರಿಗೆ ಖುಷಿಯ ವಾತಾವರಣ ಸೃಷ್ಠಿಯಾಗಿದೆ. ಪೊಲೀಸರ ಬಗ್ಗೆ ಸಾಮಾನ್ಯವಾಗಿ ಜನರಿಗೆ ಕೆಲವೊಂದು ಸಂದೇಹಗಳಿರುತ್ತದೆ. ಆದರೆ ಈ ಕ್ರಿಕೆಟ್ ಪಂದ್ಯಾಟದಲ್ಲಿ ಪೊಲೀಸ್ನವರ ಶ್ರಮ, ನಿಷ್ಠೆ, ಆಸಕ್ತಿಯನ್ನು ನೋಡಿದರೆ ಯಾರಿಗಾದರೂ ಧೈರ್ಯ ತುಂಬುತ್ತದೆ ಎಂದರು.
ಪಣಂಬೂರು ಎಸಿಪಿ ಮಹೇಶ್ ಪ್ರಸಾದ್ ಮಾತನಾಡಿ ಮನುಷ್ಯರು ಪ್ರತಿದಿನ ಪ್ರತಿಕ್ಷಣ ಒತ್ತಡದಲ್ಲಿಯೇ ಕೆಲಸ ಮಾಡುತ್ತಿರುವುದರಿಂದ ಅವರ ಮನಸ್ಥಿತಿ ಹೇಗೆ ಬೇಕಾದರೂ ಬದಲಾವಣೆಯಾಗಬಹುದು ಇದಕ್ಕೆ ಪೊಲೀಸರು ಹೊರತ್ತಾಗಿಲ್ಲ ಇದಕ್ಕಾಗಿಯೆ ಮಂಗಳೂರು ಪೊಲೀಸ್ ಕಮೀಷನರ್ ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಕ್ರೀಡಾಕೂಟಗಳನ್ನು ಆಯೋಜಿಸಿ ಪೊಲೀಸರಲ್ಲಿರುವ ಪ್ರತಿಭೆಯನ್ನು ಹೊರತರುವ ಪ್ರಯತ್ನವನ್ನು ತರುತ್ತಿದ್ದಾರೆ ಇದಕ್ಕೆ ನಾವು ಸಹಕಾರ ನೀಡುತ್ತಿದ್ದೇವೆಂದ ಅವರು ಮೂಡುಬಿದಿರೆಯ ಜನತೆ ಸಹಕಾರ ನೀಡುತ್ತಾರೆಂಬ ಉದ್ದೇಶದಿಂದ ಇಲ್ಲಿ ಪಂದ್ಯಾಟವನ್ನು ಆಯೋಜಿಸಲಾಗಿದ್ದು ಮೂಡುಬಿದಿರೆ ಠಾಣೆಯ ಪೊಲೀಸರು ಕೂಡಾ ಉತ್ತಮವಾಗಿ ಪಂದ್ಯಾಟವನ್ನು ಆಯೋಜಿಸಿದ್ದಾರೆಂದು ಶ್ಲಾಘಿಸಿದರು.
ಮೂಡುಬಿದಿರೆ ಪೊಲೀಸ್ ಠಾಣಾಧಿಕಾರಿ ನಿರಂಜನ್ ಕುಮಾರ್, ಸಬ್ ಇನ್ಸ್ಪೆಕ್ಟರ್ಗಳಾದ ಸುದೀಪ್, ಸಿದ್ಧಪ್ಪ, ದಿವಾಕರ್ ರೈ, ಪಣಂಬೂರು ಠಾಣೆಯ ಸೋಮಶೇಖರ್, ಮುಲ್ಕಿ ಠಾಣಾಧಿಕಾರಿ ಕುಸುಮಾಧರ್, ಕಾವೂರು ಠಾಣಾಧಿಕಾರಿ ಗುರುರಾಜ್, ಬಜ್ಪೆ ಠಾಣಾಧಿಕಾರಿ ಪ್ರಕಾಶ್, ಸುರತ್ಕಲ್ ಠಾಣಾಧಿಕಾರಿ ಪುನೀತ್ ಗಾಂವೊಕ್ಕರ್, ಹಾಡುಗಾರ ರಾಜೇಶ್ ಭಟ್ ಈ ಸಂದರ್ಭದಲ್ಲಿದ್ದರು.
ಆರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಂದ್ಯಾಟದಲ್ಲಿ ಭಾಗವಹಿಸಿದರು.
ಬೆಳಿಗ್ಗೆ ತಾಲೂಕು ತಹಶೀಲ್ದಾರ್ ಸತ್ಯಪ್ಪ ಸಚ್ಚಿದಾನಂದ ಕುಚನೂರು ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವೇಕ್ ಆಳ್ವ ಅವರು ಬಲೂನನ್ನು ಬಾನೆತ್ತರಕ್ಕೆ ಹಾರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು.
ಆಳ್ವಾಸ್ ನ ಪ್ರಣೀತ್, ವಕೀಲ ಚೇತನ್ ಕುಮಾರ್ ಶೆಟ್ಟಿ, ಪ್ರಾಯೋಜಕತ್ವ ನೀಡಿರುವ ಉದ್ಯಮಿ ಸುರೇಶ್ ಈ ಸಂದರ್ಭದಲ್ಲಿದ್ದರು. ಎಸ್ ಐ ಸುದೀಪ್ ಸ್ವಾಗತಿಸಿದರು. ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಿದ್ದಪ್ಪ ವಂದಿಸಿದರು.
.
0 Comments