ಮೂಡುಬಿದಿರೆ: ಇಲ್ಲಿನ ಪುರಸಭಾ ಸಂಸ್ಥೆಯು ಎಮ್ಮೆ ಮಾಂಸ ಮಾರಾಟ ಮಳಿಗೆಯನ್ನು ತೆರೆಯಲು ಪರವಾನಿಗೆ ನೀಡಬಾರದೆಂದು ನಗರದ ಮೂಡುಬಿದಿರೆ ತಾಲೂಕು ಹಿಂದೂ ಜಾಗರಣ ವೇದಿಕೆಯು ಇಂದು ಎಂ.ಅವರಿಗೆ ಇಂದು ಬೆಳಗ್ಗೆ ಮನವಿ ಸಲ್ಲಿಸಿತು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಮಾತನಾಡಿ ನಮ್ಮ ಸಂಘವು ನಿರಂತರವಾಗಿ ಗೋಹತ್ಯೆ, ಗೋ ಕಳ್ಳ ಸಾಗಾಟಣೆ ಮತ್ತು ಕಾನೂನು ಬಾಹಿರ ಕಸಾಯಿಖಾನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಜೊತೆಗೆ ಈ ಬಗ್ಗೆ ಹಲವು ಪ್ರಕರಣಗಳು ಮೂಡುಬಿದಿರೆ ಫೋಲೀಸ್ ಠಾಣೆಯಲ್ಲಿ ದಾಖಲಾಗಿದೆ ಮತ್ತು ಬೇರೆ ಬೇರೆ ಕಡೆಗಳಲ್ಲಿ ನಡೆದ ಗೋ ಕಳ್ಳತನ ಪ್ರಕರಣದಲ್ಲಿ ಮೂಡುಬಿದಿರೆಯ ಹಲವು ಮಂದಿ ಸೇರಿದ್ದಾರೆ.
ಗೋ ರಕ್ಷಣೆಗೋಸ್ಕರ ಹೋರಾಟ ಮಾಡುತ್ತಿರುವ ಒಂದೇ ಒಂದು ಕಾರಣಕ್ಕಾಗಿ ಹಿಂದೂ ಸಂಘಟನೆಯ ಕಾರ್ಯಕರ್ತ, ಅಮಾಯಕ ಪ್ರಶಾಂತ್ ಪೂಜಾರಿಯನ್ನು ಈ ಹಿಂದೆ ಹತ್ಯೆ ಮಾಡಲಾಗಿದ್ದು, ಮೂಡುಬಿದಿರೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿದೆ ಹಾಗೂ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ ಹಾಸನ್ ಅಶೋಕ್ ಟ್ರೇಡಿಂಗ್ ಪ್ರೈ.ಲಿ ಅವರು ಪರವಾನಿಗೆ ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಬೇಕು ಇಲ್ಲದಿದ್ದರೆ ಪುರಸಭೆಯ ಮುಂಭಾಗದ ಪ್ರತಿಭಟನೆಯನ್ನು ಮಾಡಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.
ಹಿಂಜಾವೇಯ ಜಿಲ್ಲಾ ಸಂಪರ್ಕ ಪ್ರಮುಖ್ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ತಾಲೂಕು ಸಂಚಾಲಕ ಸಂದೀಪ್ ಹೆಗ್ಡೆ, ಪುರಸಭಾ ಸ್ಥಾಯಿ ಅಧ್ಯಕ್ಷ ನಾಗರಾಜ ಪೂಜಾರಿ, ಹಿಂದೂ ಯುವವಾಹಿನಿಯ ನಾಗೇಂದ್ರ ಭಂಡಾರಿ, ಪ್ರಮುಖರಾದ ರಾಜೇಶ್ ಕೆಲ್ಲಪುತ್ತಿಗೆ, ಶರತ್ ಮಿಜಾರು, ಶುಭಕರ ಶೆಟ್ಟಿ ಭಾಗವಹಿಸಿದ್ದರು.
0 Comments