ಮೂಡುಬಿದಿರೆ: ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಅಂಗವಾಗಿ ಆಳ್ವಾಸ್ ಕಾಲೇಜಿನ ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರೀಷನ್ ವಿಭಾಗ ಹಾಗೂ ಐಸಿಡಿಎಸ್ ಜಂಟಿಯಾಗಿ ಪೋಷಣೆಯ ಕುರಿತು ಶೈಕ್ಷಣಿಕ ಕಾರ್ಯಕ್ರಮವನ್ನು ಬೆಳುವಾಯಿ ಅಂಗನವಾಡಿಯಲ್ಲಿ ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಫ್ಎಸ್ಎನ್ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್, ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಮಹತ್ವವನ್ನು ಜನರಿಗೆ ತಿಳಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪೌಷ್ಟಿಕಾಂಶ ಮತ್ತು ಅದರಿಂದ ಆಗುವ ತೊಂದರೆಗಳಾದ ಆಸ್ಟಿಯೋ ಪೋರೋಸಿಸ್, ಅನೀಮಿಯ ಮುಂತಾದವುಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದರು. ಈ ಕಾರ್ಯಕ್ರಮದ ಅಂಗವಾಗಿ, ಡಯಟ್ ಕ್ಯಾಂಪ್ನಲ್ಲಿ ಹಿಮೋಗ್ಲೋಬಿನ್, ಎತ್ತರ, ತೂಕ, ಬಾಡಿ ಮಾಸ್ ಇಂಡೆಕ್ಸ್ ಹಾಗೂ ಪೌಷ್ಟಿಕಾಂಶ ಸಮಾಲೋಚನೆಗಳು ನಡೆದವು.
ಕಾರ್ಯಕ್ರಮದಲ್ಲಿ ಆಳ್ವಾಸ್ ನರ್ಸಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಿ ಕವಿತಾ ಡಿ’ಸಿಲ್ವಾ `ಯುವ ಮನಸ್ಸುಗಳಲ್ಲಿ ಧನಾತ್ಮಕ ದೃಢೀಕರಣ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿಭಾಗದ 45ವಿದ್ಯಾರ್ಥಿಗಳು ಬೆಳುವಾಯಿಯಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡಿದ್ದು, 200ಕ್ಕೂ ಅಧಿಕ ಜನರು ಭಾಗವಹಿಸಿ, ಶಿಬಿರದ ಉಪಯೋಗ ಪಡೆದುಕೊಂಡರು. ಬೆಳುವಾಯಿ ಪರಿಸರದ ೬೦ಕ್ಕೂ ಹೆಚ್ಚು ಜನರು ತಮ್ಮ ದಿನನಿತ್ಯದಲ್ಲಿ ಬಳಸುವ ಆಹಾರ ಖಾದ್ಯಗಳನ್ನು ಪೌಷ್ಟಿಕಾಂಶದ ತಪಾಸಣೆಗೆ ತಂದಿದ್ದರು.
ಈ ಸಂದರ್ಭ ವಿಭಾಗದ ಉಪನ್ಯಾಸಕರಾದ ಅಶ್ವಿನಿ ಮತ್ತು ಅಮೃತಇಂದು, ಐಸಿಡಿಎಸ್ ಸಂಯೋಜಕರು, ಬೆಳುವಾಯಿ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಮೃತಾ ಕಾರ್ಯಕ್ರಮವನ್ನು ನಿರೂಪಿಸಿದರು.
0 Comments