ಸಮಯ ಪ್ರಜ್ಞೆ, ಸಾಮಾಜಿಕ ಬದ್ಧತೆ, ಸಾಮಾನ್ಯ ಜ್ಞಾನದ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು : ಡಾ|| ಚೂಂತಾರು

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ : ಶಾಲೆಯಲ್ಲಿ ಪಠ್ಯದ ಜೊತೆಗೆ ದೇಶಪ್ರೇಮ, ಪರಿಸರ ಪ್ರೇಮ ಮತ್ತು ಸಾಮಾಜಿಕ ಕಳಕಳಿ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಬೇಕು. ಬರೀ ಪುಸ್ತಕದ ಪಾಠದಿಂದ ಮಕ್ಕಳ ವ್ಯಕ್ತಿತ್ವ ಸಂಪೂರ್ಣವಾಗಿ ರೂಪುಗೊಳ್ಳುವುದಿಲ್ಲ. ಸಮಯ ಪ್ರಜ್ಞೆ, ಸಾಮಾಜಿಕ ಬದ್ಧತೆ, ಸಾಮಾನ್ಯ ಜ್ಞಾನದ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಎಳವೆಯಲ್ಲಿಯೇ ಗಿಡ ನೆಟ್ಟು ಪರಿಸರ ರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಹಾಗಾದಲ್ಲಿ ಮಾತ್ರ ಇಂದಿನ ಮಕ್ಕಳೇ ಮುಂದಿನ ಜವಾಬ್ದಾರಿಯುತ ಪ್ರಜೆಗಳು ಆಗಲು ಸಾಧ್ಯ ಎಂದು ದ. ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.

 ಅವರು ಗೃಹರಕ್ಷಕದಳದ ಆಶ್ರಯದಲ್ಲಿ ಬನ್ನಡ್ಕದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇದರ ಆವರಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ವಾಸುದೇವ ಆಚಾರ್ಯ ಅವರು ಮಾತನಾಡಿ ಮಕ್ಕಳಿಗೆ ಪರಿಸರದ ರಕ್ಷಣೆ ಬಗ್ಗೆ ತಿಳುವಳಿಕೆ ಹೇಳಿದರು. ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತಿನಂತೆ ನಾವು ಕಷ್ಟ ಪಟ್ಟು ಶ್ರಮವಹಿಸಿ ದುಡಿದರೆ ನಮ್ಮ ಬಾಳು ಬಂಗಾರವಾದೀತು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. 

 ಮೂಡುಬಿದಿರೆ ಗೃಹರಕ್ಷಕದಳದ ಘಟಕಾಧಿಕಾರಿ ಪಾಂಡುರಾಜ್, ಹಿರಿಯ ಗೃಹರಕ್ಷಕರಾದ ಲಾರೆನ್ಸ್ ಡಿ'ಸೋಜಾ, ಮೇಲ್ವಿನ್ ರೋಜರಿಯೋ, ಪದ್ಮನಾಭ, ಸುಮನ ಆಚಾರ್ಯ, ವಿಜಯಲಕ್ಷ್ಮಿ, ಕಾವ್ಯ, ಅಶ್ವಿನಿ, ಮುಂತಾದವರು ಉಪಸ್ಥಿತರಿದ್ದರು. ಸುಮಾರು 35 ಮಂದಿ ಗೃಹರಕ್ಷಕರು ಈ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

ಮಾವು, ಬೇವು, ಪೇರಳೆ, ನೇರಳೆ, ಶ್ರೀಗಂಧ, ರಕ್ತಚಂದನ, ಸಾಗುವಾನಿ, ಹಲಸು, ಹೆಬ್ಬಲಸು ಮುಂತಾದ ಹಣ್ಣು ಮತ್ತು ಹೂವಿನ ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು.

Post a Comment

0 Comments