ಮೂಡುಬಿದಿರೆ: ಕೇಂದ್ರದ ಬಿಜೆಪಿ ಸರಕಾರವು ಇ.ಡಿ ಮತ್ತು ಐಟಿ ಸಂಸ್ಥೆಯನ್ನು ದುರುಪಯೋಗ ಪಡಿಸಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಇಡಿ ಕೇಂದ್ರ ಸರಕಾರದ ಕೈಗೊಂಬೆಯಾಗಿದೆ. ಕಾಂಗ್ರೆಸ್ನ ಮುಖಂಡರುಗಳಾದ ಡಿಕೆ.ಶಿವಕುಮಾರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಸದೆ ಬಡಿಯುವಂತಹ ಕೆಲಸ ಆಗುತ್ತಿದೆ. ಬಿಜೆಪಿಯ ಭ್ರಷ್ಠಾಚಾರದ ವಿರುದ್ಧ ಮಾತನಾಡಿದರೆ ಇ.ಡಿ.ಮೂಲಕ ದಾಳಿ ಮಾಡುವಂತಹ ಕೆಲಸವನ್ನು ಬಿಜೆಪಿ ಆಡಳಿತದ ಕೇಂದ್ರ ಹಾಗೂ ರಾಜ್ಯ ಸರಕಾರ ಮಾಡುತ್ತಿದೆ. ಸ್ವಾತಂತ್ರ್ಯ
ಪೂರ್ವದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹುಟ್ಟು ಹಾಕಿದವರು ಜವಹಾರಲಾಲ್ ನೆಹರು ಅವರು. ಅವರ ತಂದೆ ಮೋತಿಲಾಲ್ ಅವರು ೭ ಸಾವಿರ ಕೋ.ರೂವನ್ನು ದಾನ ಮಾಡಿದ್ದಾರೆ. ಆದರೆ ಬಿಜೆಪಿಯ ರಾಜಕರಣಿಗಳು ಯಾರಾದರು ಪ್ರಾಣ ತ್ಯಾಗ ಮಾಡಿದ್ದಾರ ಅಥವಾ ಆಸ್ತಿಯನ್ನು ಕಳೆದುಕೊಂಡಿದ್ದಾರ..? ಬಿಜೆಪಿ ಸರಕಾರಗಳು ವಿರೋಧ ಪಕ್ಷದವರನ್ನು ಸದೆ ಬಡಿಯುವಂತಹ ಕೆಲಸ ಮಾಡುತ್ತಿವೆ ಇದನ್ನು ನಾವು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ತಾಲೂಕು ಕಛೇರಿಯು ತಹಶೀಲ್ದಾರ್ಗಾಗಿ ಇರುವುದು ಆದರೆ ಇಲ್ಲಿ ಎಂಎಲ್ಎ ಅವರ ಕಛೇರಿ ತಾಲೂಕು ಕಛೇರಿಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ನ ಯುವ ನಾಯಕ ಮಿಥುನ್ ರೈ ಮಾತನಾಡಿ ಇಡಿ ಅಧಿಕಾರಿಗಳು ಮುಂದಿಟ್ಟುಕೊಂಡು ನಮ್ಮ ನಾಯಕರಾದ ರಾಹುಲ್ ಮತ್ತು ಸೋನಿಯಾಗಾಂಧಿಯವರ ಮೇಲೆ ಯಾವುದೇ ಆರೋಪವಿಲ್ಲದ ಕೇಸ್ನಲ್ಲಿ ಸಿಲುಕಿಸಿ ನೋಟೀಸ್ ಕೊಟ್ಟು ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸ ನಡೆಯುತ್ತಿದೆ. ಸರ್ವಾಧಿಕಾರದ ಧೋರಣೆಯನ್ನು ಬಿಜೆಪಿ ಸರಕಾರ ಮತ್ತು ನಾಯಕರುಗಳು ಮಾಡುತ್ತಿದ್ದಾರೆ. ಅಮಿತ್ ಷಾ ಅವರ ಪುತ್ರ ಜೈನ್ ಷಾ ೫೦,೦೦೦ದಿಂದ ಆರಂಭಿಸಿರುವ ಸಂಸ್ಥೆ ಇದೀಗ ೮೦,೦೦೦ ಕೋಟಿ ಲಾಭವನ್ನು ಪಡೆದಿದೆ. ಇವರ ಬಗ್ಗೆ ಯಾಕೆ ಇ.ಡಿ. ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ..? ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ ದುಬೈಗೆ ಮತ್ತು ಅವರ ಪುತ್ರ ವಿದೇಶಕ್ಕೆ ಹೋಗುತ್ತಿರುವ ಉದ್ದೇಶವೇನು ಇವರ ಮೇಲೆ ಯಾಕೆ ಇಡಿ ದಾಳಿಯಾಗುತ್ತಿಲ್ಲವೆಂದು ಪ್ರಶ್ನಿಸಿದ ಅವರು ಬಿಜೆಪಿಯ ಈ ಧೋರಣೆಯನ್ನು ಖಂಡಿಸುತ್ತೇವೆ. ಬಿಜೆಪಿ ಪಕ್ಷ ಹಾಗೂ ಮೋದಿಗೆ ನೈತಿಕ ಇದ್ದರೆ ಅವರ ಪಕ್ಷದಲ್ಲಿರುವ ಭ್ರಷ್ಟ, ಕಳಂಕ ಹೊಂದಿರುವ ರಾಜಕರಣಿಗಳನ್ನು ಇ.ಡಿ ಅಧಿಕಾರಿಗಳಿಂದ ಬಂಧಿಸುವಂತಹ ಕ್ರಮವನ್ನು ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ಸುರೇಶ್ ಕೋಟ್ಯಾನ್, ಕೊರಗಪ್ಪ, ಇಕ್ಬಾಲ್ ಕರೀಂ, ಜೊಸ್ಸಿ ಮಿನೇಜಸ್, ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯರಾದ ಪುರುಷೋತ್ತಮ ನಾಯಕ್, ಪಡುಮಾರ್ನಾಡು ಗ್ರಾ.ಪಂ. ಉಪಾಧ್ಯಕ್ಷ ಅಭಿನಂದನ್ ಬಲ್ಲಾಳ್, ವಾಲ್ಪಾಡಿ ಗ್ರಾ.ಪಂ.ಉಪಾಧ್ಯಕ್ಷ ಅರುಣ್ ಶೆಟ್ಟಿ, ತಾ.ಪಂ.ಮಾಜಿ ಸದಸ್ಯ ಎಂ.ಜಿ.ಮಹಮ್ಮದ್, ರಾಜೇಶ್ ಕಡಲಕೆರೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆ ನಿರತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
0 Comments