ಮೂಡುಬಿದಿರೆ : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಮಂಗಳೂರು) ಇದರ ವತಿಯಿಂದ ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಮೂಡುಬಿದಿರೆಯ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯಲ್ಲಿ ಉಚಿತ ನಂದಿನಿ ಸುವಾಸಿತ ಹಾಲು, ಗೋಧಿ ಲಾಡು ಮತ್ತು ಯುಎಚ್ಟಿ ಪ್ಲೆಕ್ಸಿ ಹಾಲು ವಿತರಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಹಲವಾರು ಪೌಷ್ಟಿಕಾಂಶಗಳ ಆಗರವಾಗಿದ್ದು, ಎಲ್ಲರಿಗೂ ಎಲ್ಲಕಾಲಕ್ಕೂ
ಅಗತ್ಯವಿರುವ ಹಾಲು, ಎಲ್ಲೆಡೆಯೂ ಸಿಗುವಂತಾಗಬೇಕು ಎಂದರು.
ಹಾಲು ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ, ವಿತರಣೆಯಲ್ಲಿ ಗೋವಿನಿಂದ ಗ್ರಾಹಕರವರೆಗಿನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರ ಸೇವೆ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್, ವಿಶ್ವ ಹಾಲು ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುತ್ತಿರುವ ಬಗ್ಗೆ ಉಲ್ಲೇಖಿಸಿ, ನಂದಿನಿ ಹಾಲನ್ನು ಪ್ರತಿದಿನ ಸೇವಿಸಿ ಆರೋಗ್ಯವಂತರಾಗುವಂತೆ ಕರೆ ನೀಡಿದರು.
ಮಾರುಕಟ್ಟೆ ವ್ಯವಸ್ಥಾಪಕ ಡಾ.ರವಿರಾಜ ಉಡುಪ, ಸಹಾಯಕ ವ್ಯವಸ್ಥಾಪಕರಾದ ಜಾನೆಟ್ ರೊಸಾರಿಯೋ ಮತ್ತು ಸಚಿನ್, ಮಾರುಕಟ್ಟೆ ಅಧಿಕಾರಿ ಎಂ.ರವಿ ಮತ್ತು ಗೋಪಾಲಕೃಷ್ಣ ರಾವ್ ಉಪಸ್ಥಿತರಿದ್ದರು.
ಶಾಲಾ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿ, ವಂದಿಸಿದರು.
0 Comments