ಯೋಗಿ ಆದಿತ್ಯನಾಥ್‌ ಪದಗ್ರಹಣದ ವೇಳೆ ದಂಗೆಗೆ ಎಸ್‌ಪಿ ಸಂಚು! ಪ್ರಯತ್ನ ವಿಫಲಗೊಳಿಸಿದ್ದ ಪೊಲೀಸರು

ಜಾಹೀರಾತು/Advertisment
ಜಾಹೀರಾತು/Advertisment


ಲಖನೌ: ಉತ್ತರ ಪ್ರದೇಶದಲ್ಲಿ ಎರಡನೇ  ಬಾರಿ ಯೋಗಿ ಆದಿತ್ಯನಾಥ್‌ ಅವರು ಪ್ರಮಾಣ ವಚನ ಸ್ವೀಕರಿಸುವ ದಿನವೇ ಜನರನ್ನು ದಂಗೆ ಏಳಿಸುವ ಹುನ್ನಾರ ನಡೆದಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಕುತಂತ್ರದ ಹಿಂದೆ ಸಮಾಜವಾದಿ ಪಕ್ಷದ ನಾಯಕರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಾರ್ಚ್‌ 25ರಂದು ಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದ ವೇಳೆ ಅವರ ತವರು ಕ್ಷೇತ್ರ ಗೋರಖ್‌ಪುರದಲ್ಲಿ ರಸ್ತೆ ತಡೆ ಹಾಗೂ ರೈಲು ತಡೆ ನಡೆಸುವ ಪ್ರಯತ್ನವನ್ನು ದುಷ್ಕರ್ಮಿಗಳು ನಡೆಸಿದ್ದರು. ಛೌರಿ ಛೌರ ಪ್ರದೇಶದಲ್ಲಿ ಹುತಾತ್ಮ ಯೋಧ ಧನಂಜಯ್‌ ಸಿಂಗ್‌ ಅವರ ಶವವನ್ನು ರಸ್ತೆ ಮಧ್ಯೆ ಇರಿಸಿ, ಸಿಎಂ

ಯೋಗಿ ವಿರುದ್ಧ ಜನರನ್ನು ದಂಗೆ ಎಬ್ಬಿಸಲು ಯತ್ನ ನಡೆದಿತ್ತು.

ಆದರೆ, ಪೊಲೀಸರಿಗೆ ಗುಪ್ತಚರ ವಿಭಾಗದಿಂದ ಈ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಕೂಡಲೇ   ರಸ್ತೆ ತಡೆಗೆ ಮುಂದಾದವರನ್ನು ಚದುರಿಸಿದ್ದಾರೆ. ಮಿತಿಮೀರುವ ಮುನ್ನವೇ ದಂಗೆಯನ್ನು ಶಮನಗೊಳಿಸಿ, ಪರಿಸ್ಥಿತಿ ಹತೋಟಿಗೆ ತೆಗೆದು ಕೊಂಡಿದ್ದಾರೆ ಎಂದು ತಡವಾಗಿ  ಬಯಲಾಗಿದೆ.

ಜನರನ್ನು ಗುಂಪುಗೂಡಿಸಲು ಸಾಮಾಜಿಕ ಜಾಲತಾಣವನ್ನು ಅಸ್ತ್ರವಾಗಿ ಬಳಸಲಾಗಿತ್ತು. ಇದರಲ್ಲಿ ಶಾಮೀಲಾಗಿದ್ದ 14 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಸುಮಾರು 56 ಆರೋಪಿಗಳ ವಿರುದ್ಧ ಪೊಲೀಸರು ವಿವಿಧ ಪ್ರಕರಣಗಳನ್ನು ದಾಖಲಿಸಿದ್ದು, ಈ ಪೈಕಿ ಬಹುತೇಕರು ಸಮಾಜವಾದಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಾಗಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಯಾಗಿರುವ ಎಸ್‌ಪಿ ಮುಖಂಡ ಮನುರಂಜನ್‌ ಯಾದವ್‌ ನಾಪತ್ತೆಯಾಗಿದ್ದು, ಆತನ ಮಾಹಿತಿ ನೀಡಿದವರಿಗೆ 25 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.  ಪದಗ್ರಹಣ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿ ಹಲವು ಪ್ರಮುಖ ನಾಯಕರು ಆಗಮಿಸಿದ್ದರು. 

ಯೋಗಿ ಆದಿತ್ಯನಾಥ್‌ ಅವರ ಜೊತೆ 52 ಮಂದಿ  ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಒಟ್ಟು 7 ಹಂತಗಳಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದಿತ್ತು. 403 ಕ್ಷೇತ್ರಗಳ ಪೈಕಿ 273 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ದಾಖಲೆ ನಿರ್ಮಿಸಿತ್ತು. ಸಮಾಜವಾದಿ ಪಕ್ಷ ಪ್ರಬಲ ಹೋರಾಟ ತೋರಿದರೂ ತನ್ನ ಸ್ಥಾನ ಹೆಚ್ಚಿಸಿಕೊಳ್ಳಲು ಮಾತ್ರ ಸೀಮಿತವಾಗಿತ್ತು. ಇನ್ನು, ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಉತ್ತರ ಪ್ರದೇಶದಲ್ಲಿ ಹೀನಾಯ ಪ್ರದರ್ಶನ ತೋರಿದ್ದವು. ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲು 203 ಸ್ಥಾನಗಳ ಅವಶ್ಯಕತೆ ಇದ್ದು, 273 ಕ್ಷೇತ್ರಗಳಲ್ಲಿ ಗೆದ್ದ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

Post a Comment

0 Comments