ಆಳ್ವಾಸ್ ಸಹಕಾರ ಸಂಘ(ನಿ) ವಾರ್ಷಿಕ ಮಹಾಸಭೆ
೪.೦೮ ಕೋಟಿ ಲಾಭ- ಶೇ ೧೭ ಡಿವಿಡೆಂಡ್ 
ಮೂಡುಬಿದಿರೆ: ಆಳ್ವಾಸ್ ಸಹಕಾರ ಸಂಘವು ೨೦೨೫-೨೬ ನೇ ಸಾಲಿನಲ್ಲಿ ೨೦೦ ಕೋಟಿ ವ್ಯವಹಾರ ನಡೆಸಿದೆ. ೯೦ಕೋಟಿ ಠೇವಣಿ ಹೊಂದಿದ್ದು ವಷಾಂತ್ಯಕ್ಕೆ ೧೨೫ ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಿದೆ. ಶೇ ೯೯.೯೮ ಸಾಲ ಮರುಪಾವತಿಯಾಗಿದ್ದು ೪.೦೮ ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಪ್ರತೀ ವರ್ಷದಂತೆ ಈ ವರ್ಷವೂ ೧೭% ಡಿವಿಡೆಂಟ್ ನೀಡುವುದಾಗಿ ಸಂಘದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೇಳಿದರು. 
ಅವರು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಶನಿವಾರ ನಡೆದ ಸಂಘದ ೧೦ ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ವರ್ಷ ಮಿಜಾರಿನಲ್ಲಿ ಸಂಘದ ವಿಸ್ತೃತ ಶಾಖೆಯನ್ನು ತೆರೆಯಲಾಗುವುದು. ಸದಸ್ಯರ ಅನುಕೂಲಕ್ಕಾಗಿ ಸಹಕಾರಿ ಆಪ್ ಹೊರತಂದಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆಳ್ವಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸದಸ್ಯರಿಗೆ ವಿಮಾ ಯೋಜನೆಯನ್ನು ಕಾರ್‍ಯಗತಗೊಳಿಸುವ ಚಿಂತನೆಯೂ ಇದೆ ಎಂದರು. 
ಇದೇ ಸಂದರ್ಭದಲ್ಲಿ ಸಹಕಾರ ಇಲಾಖೆಯ ಸಹಕಾರ ಶಿಕ್ಷಣ ನಿಧಿಗೆ ೩.೬೨ ಲಕ್ಷದ ಚೆಕ್ಕನ್ನು ಮೂಡುಬಿದಿರೆ ಸಹಕಾರಿ ತರಬೇತಿ ಕೇಂದ್ರದ ಬಿಂದು ಅವರ ಮೂಲಕ ಸಲ್ಲಿಸಲಾಯಿತು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯ ಅತ್ಯಧಿಕ ಅಂಕ ಗಳಿಸಿದ ಆಳ್ವಾಸ್ ಆಂಗ್ಲಮಾಧ್ಯಮ, ಕನ್ನಡ ಮಾಧ್ಯಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ತಲಾ ೧೦ ಸಾವಿರ ನಗದಿನೊಂದಿಗೆ ಸನ್ಮಾನಿಸಲಾಯಿತು. ಹಾಗೂ ಸಿ.ಎ ಪರೀಕ್ಷೆಯಲ್ಲಿ ಟಾಪರ್ ಆಗಿರುವ ದೀಪಕ್ ಹೆಗ್ಡೆ ಹಾಗೂ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಧನಲಕ್ಷ್ಮೀ ಪೂಜಾರಿ ಅವರ ಪರವಾಗಿ ಪೋಷಕರನ್ನು ಸನ್ಮಾನಿಸಲಾಯಿತು. 
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಕೆ.ಶ್ರೀಪತಿ ಭಟ್, ನಾರಾಯಣ ಪಿ.ಎಂ, ಜಯರಾಮ ಕೋಟ್ಯಾನ್, ವಿವೇಕ್ ಆಳ್ವ, ಮಹಮ್ಮದ್ ಶರೀಫ್, ಪ್ರಕಾಶಿನಿ ಹೆಗ್ಡೆ, ಪ್ರೋ. ಕುರಿಯನ್, ರಾಮಚಂದ್ರ ಮಿಜಾರು, ಅಶ್ವಿನ್ ಜೋಸ್ಸಿ ಪಿರೇರಾ, ಮೀನಾಕ್ಷಿ ಉಪಸ್ಥಿತರಿದ್ದರು. 

ಉಪಾಧ್ಯಕ್ಷ ಮೋಹನ್ ಪಡಿವಾಳ್ ಸ್ವಾಗತಿಸಿದರು. ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ ವರದಿ ವಾಚಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಯರಾಮ್ ಕೋಟ್ಯಾನ್ ವಂದಿಸಿದರು.