ಸಣ್ಣ ಪಟ್ಟಣಗಳ ವೈವಿಧ್ಯತೆಯ ದಾಖಲೀಕರಣ ಅಗತ್ಯ: ಸುಭಾಶ್ಚಂದ್ರ ಬಸು
ಮೂಡುಬಿದಿರೆ: ಗ್ರಾಮಗಳ ಬಳಿಕ ಇದೀಗ ಸಣ್ಣ ಪಟ್ಟಣಗಳ ವೈವಿಧ್ಯತೆ, ಪರಂಪರೆಯನ್ನು ದಾಖಲಿಸಿಕೊಂಡು ಕಾಪಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜಲ ಮೂಲಗಳ ಕಲುಷಿತಗೊಳ್ಳುತ್ತಿವೆ. ಇದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಲಿದ್ದು ನಮ್ಮೆಲ್ಲರಿಗೂ ಪ್ರಸ್ತುತ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ ( ಇಂಟಾಕ್) ಮಂಗಳೂರು ಘಟಕದ ಸಂಚಾಲಕ ಸುಭಾಶ್ಚಂದ್ರ ಬಸು ಹೇಳಿದರು. ಅವರು ರೋಟರಿ ಕ್ಲಬ್ ಮೂಡುಬಿದಿರೆ ಸಹಯೋಗದಲ್ಲಿ ಸಮ್ಮಿಲನ್ ಸಭಾಂಗಣದಲ್ಲಿ ಸೋಮವಾರ ಸಂಜೆ ಇಂಟಾಕ್ ರೂಪಿಸಿದ ಮೂಡುಬಿದಿರೆ ಹೆರಿಟೇಜ್ ಮ್ಯಾಪ್ ಹಾಗೂ ಟ್ರೆಡಿಶನಲ್ ವಾಟರ್ ಸಿಸ್ಟಮ್ಸ್ ಆಫ್ ಮೂಡುಬಿದಿರೆ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಅವಿಭಜಿತ ದ.ಕ ಜಿಲ್ಲೆಯಲ್ಲಿ ಮಂಗಳೂರಿನ ಬಳಿಕ ಎರಡನೆಯದಾಗಿ ಮೂಡುಬಿದಿರೆಯ ಹೆರಿಟೇಜ್ ಮ್ಯಾಪ್ ರೂಪಿಸಲಾಗಿದೆ. ಶ್ರೀಘ್ರದಲ್ಲೇ ಕಾರ್ಕಳದ ಹೆರಿಟೇಜ್ ಮ್ಯಾಪ್ ಬಿಡುಗಡೆಗೂ ಸಿದ್ಧತೆ ನಡೆದಿದೆ ಎಂದರು. ಊರಿನ ಸಾಂಸ್ಕೃತಿಕ , ಪಾರಂಪರಿಕ ವಿಶೇಷತೆಗಳ ದಾಖಲೀಕರಣ, ಕೃತಿ ಪ್ರಕಟಣೆ, ಅಧ್ಯಯನ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗೆ ಸ್ವಯಂ ಸೇವಕರು, ಸದಸ್ಯ, ಸಂಪನ್ಮೂಲ ವ್ಯಕ್ತಿಗಳಾಗಿ ಆರ್ಥಿಕವಾಗಿಯೂ ಸ್ಪಂದಿಸುವವರ ಅಗತ್ಯವಿದೆ ಎಂದವರು ಹೇಳಿದರು.
ರೋಟರಿ ಅಧ್ಯಕ್ಷ ನಾಗರಾಜ್ ಹೆಗ್ಡೆ ಹೆರಿಟೇಜ್ ಮ್ಯಾಪ್, ಹಾಗೂ ಕೃತಿಯ ಲೋಕಾರ್ಪಣೆ ನೆರವೇರಿಸಿದರು. ಊರಿನ ಪಾರಂಪರಿಕ ವಿಶೇಷತೆ, ಅಗತ್ಯತೆಯ ಕುರಿತು ಕೃತಿ , ಅಧ್ಯಯನ ವರದಿಗಳನ್ನು ಕಟ್ಟಿಕೊಟ್ಟಿರುವ ಸಂಸ್ಥೆಗೆ ಜನತೆಯ ಪರವಾಗಿ ಅವರು ಕೃತಜ್ಞತೆ ಅರ್ಪಿಸಿದರು.
ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ದೆಹಲಿ ಮೂಲದ ಸರಕಾರೇತರ ಸಂಸ್ಥೆಯಾಗಿರುವ ಇಂಟಾಕ್ ಭಾರತೀಯ ಪರಂಪರೆಯ ಕುರಿತು ಜನರಿಗೆ ಅರಿವು, ,ಜಾಗೃತಿ ಮತ್ತು ರಕ್ಷಣೆಯ ಕಾರ್ಯದಲ್ಲಿ 230 ರಷ್ಟು ಶಾಖೆಗಳ ಮೂಲಕ ಸಕ್ರಿಯವಾಗಿದೆ. ಮಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಇಂಟಾಕ್ ಇದೀಗ ಮೂಡುಬಿದಿರೆಯ ಪಾರಂಪರಿಕ ತಾಣಗಳು, ಜಲಮೂಲಗಳ ಕುರಿತ ಅಧ್ಯಯನ ವರದಿ ಜತೆಗೆ ವಿಶೇಷವಾಗಿ ಗೌರೀಕೆರೆಯ ಮಹತ್ವ ಅಭಿವೃದ್ಧಿ ಸಾಧ್ಯತೆಗಳ ಕುರಿತು ತಯಾರಿಸಿರುವ ವರದಿಗಳು ಉಪಯುಕ್ತ ಕೊಡುಗೆಗಳಾಗಿವೆ ಎಂದರು.
ರೋಟರಿ ವತಿಯಿಂದ ಸುಭಾಶ್ಚಂದ್ರ ಬಸು ಅವರನ್ನು ಗೌರವಿಸಲಾಯಿತು.
ರೋಟರಿ ಚ್ಯಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಜರಗಿದ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಪಿ.ಕೆ. ಥೋಮಸ್, ರೋಟರಿ ಕಾರ್ಯದರ್ಶಿ ಪವನ್ ಪೈ ಇಂಟಾಕ್ ಬಳಗದ ಶರ್ವಾಣಿ ಭಟ್ , ಮುರಳಿ, ನೇಮಿರಾಜ್ ಶೆಟ್ಟಿ, ರಾಜೇಂದ್ರ ಕೇದಿಗೆ, ಹರೀಶ್ ಕೊಡಿಯಾಲ್ ಬೈಲ್, ರೇಷ್ಮಾ ಶೆಟ್ಟಿ ರೋಟರಿ ಕಾರ್ಯದರ್ಶಿ ಪವನ್ ಪೈ ಉಪಸ್ಥಿತರಿದ್ದರು.


0 Comments