ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ವಿಭಾಗದ 2,627 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
 
ಮೂಡುಬಿದಿರೆ : ಮಂಗಳೂರು ವಿಶ್ವವಿದ್ಯಾನಿಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಒಟ್ಟು 2,627 ವಿದ್ಯಾರ್ಥಿಗಳಿಗೆ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಶನಿವಾರ ಪದವಿ ಪ್ರದಾನ ಮಾಡಲಾಯಿತು.
ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ. ಕೆ ಚಿನ್ನಪ್ಪ ಗೌಡ ಪದವಿ ಪ್ರದಾನ ಮಾಡಿ ಮಾತನಾಡಿ ಮೆದುಳು ಮತ್ತು ಮನಸ್ಸನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ, ಇವೆರಡೂ ಜೊತೆಯಾಗಿ ಕಾರ್ಯನಿರ್ವಹಿಸಬೇಕು. ಬುದ್ಧಿ ಮತ್ತು ಮನಸ್ಸುಗಳನ್ನು ಒಟ್ಟಿಗೆ ಜೋಡಿಸಿ ಮುನ್ನಡೆಸಿದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. 
ಪದವಿ ಪ್ರಮಾಣಪತ್ರ ಎಂಬುದು ಕೇವಲ ಒಂದು ಕಾಗದದ ತುಂಡು ಮಾತ್ರ. ಅದರಲ್ಲಿ ಕೇವಲ ವಿದ್ಯಾರ್ಥಿಯ ಹೆಸರು, ಪದವಿ ಮತ್ತು ಅಂಕಗಳು ಇರುತ್ತವೆಯೇ ಹೊರತು ಅದೇ ಅಂತಿಮವಲ್ಲ. ನಾಳೆ ಉದ್ಯೋಗ ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು ಕೇವಲ ಪ್ರಮಾಣಪತ್ರವನ್ನು ನೋಡಿಯಲ್ಲ, ಬದಲಿಗೆ ಅವರಲ್ಲಿರುವ ಯೋಗ್ಯತೆ, ಅರ್ಹತೆ ಮತ್ತು ಪ್ರತಿಭೆಯನ್ನು ಆಧರಿಸಿ ಎಂಬುದನ್ನು ಮರೆಯಬಾರದು.
ಆಳ್ವಾಸ್ ಶಿಕ್ಷಣ ಸಂಸ್ಥೆ ಕೇವಲ ಪದವಿ ಅಥವಾ ಅಂಕಗಳನ್ನು ನೀಡುವ ಕೇಂದ್ರವಲ್ಲ. ಬದಲಿಗೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಉತ್ತಮ ಚಾರಿತ್ರ್ಯವನ್ನು ಮೂಡಿಸುವ ಮೂಲಕ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತಿದೆ. ಎಲ್ಲಾ ಕಾಲೇಜುಗಳಲ್ಲೂ ಕೋರ್ಸ್‌ಗಳು, ಶಿಕ್ಷಕರು ಮತ್ತು ಪರೀಕ್ಷೆಗಳು ಇರುತ್ತವೆ. ಆದರೆ ಆಳ್ವಾಸ್ ಕಾಲೇಜಿನ ವೈಶಿಷ್ಟ್ಯವೇ ಬೇರೆ. ಈ ಸಂಸ್ಥೆಯಿಂದ ಹೊರಹೋಗುವಾಗ ವಿದ್ಯಾರ್ಥಿಗಳು ಕೇವಲ ಪ್ರಮಾಣಪತ್ರವನ್ನು ಮಾತ್ರವಲ್ಲ, ಇಲ್ಲಿನ ಭವ್ಯ ಪರಂಪರೆ ಮತ್ತು ಮೌಲ್ಯಗಳನ್ನು ಜೊತೆಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದರು.
 ವಿದ್ಯಾರ್ಥಿಗಳು ಮುಂದೆ ಉದ್ಯೋಗಕ್ಕೆ ಸೇರಿದಾಗ ಅಥವಾ ಬೇರೆಡೆಗೆ ಹೋದಾಗ ತಾವು ಕಲಿತ ಸಂಸ್ಥೆಯ ಹೆಸರನ್ನು ಎತ್ತಿ ಹಿಡಿಯುವುದು ಬಹಳ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಲಿದ್ದು, ಆಗ ಆಳ್ವಾಸ್ ಸಂಸ್ಥೆಯ ಅನುಭವ, ನೋಟ ಮತ್ತು ಜಗತ್ತು ಅವರ ಜೊತೆಗಿರುತ್ತದೆ. ಆಳ್ವಾಸ್ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ಸಂಸ್ಥೆಯಾಗಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ, ಸಾಹಿತ್ಯಿಕ ಸೇರಿದಂತೆ ಎಲ್ಲಾ ರೀತಿಯ ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ವಹಿಸಿದ್ದರು. 
ಡಾ. ಕೇಕೆಸನ, ಡಾ. ಅಂಜನಾ ಎಂ., ಡಾ. ನರೇಶ್ ಅವರಿಗೆ ಪಿ. ಬಿ ಆಚಾರ್ಯ ಗೋಲ್ಡ್ ಅವಾರ್ಡ್ ಹಾಗೂ ಡಾ. ನೌರೆನ್ ಸಿಂಗ್, ಡಾ. ಗೌತಮ್ ಬಿ. ಅವರಿಗೆ ಸೀತಾರಾಮ್ ಜಿಂದಾಲ್ ಗೋಲ್ಡ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಡಾ. ಕುರಿಯನ್, ಡಾ. ವನಿತಾ ಶೆಟ್ಟಿ, ಡಾ. ಪೀಟರ್ ಫೆರ್ನಾಂಡಿಸ್, ಡಾ. ಶಂಕರ್ ಮೂರ್ತಿ, ಮಧು ಜಿ. ಆರ್, ಶಂಕರ್ ಶೆಟ್ಟಿ, ಡಾ. ಕ್ಷಮಾ ಸುಶೀಲ್ ಶೆಟ್ಟಿ, ಡಾ. ಸುಶೀಲ್ ಶೆಟ್ಟಿ, ಡಾ. ಪ್ರವೀಣ್ ರಾಜ್ ಆಳ್ವ ಉಪಸ್ಥಿತರಿದ್ದರು. ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.