ಮೂಡುಬಿದಿರೆ : ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸುವ ಹಾಗೂ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಹಣದ ವ್ಯವಹಾರ ನಡೆಸುವ ಮತ್ತು ಗಣಿತೀಯ ಹಾಗೂ ವೃತ್ತಿಪರ ಚಿಂತನೆ ಬೆಳೆಸುವ ಉದ್ದೇಶದೊಂದಿಗೆ ಅಳಿಯೂರಿನ ಸರ್ಕಾರಿ ಪ್ರೌಢಶಾಲೆಯ ಗ್ರಾಹಕ ಸಂಘವು ಶಾಲೆಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಮೇಳವನ್ನು ಆಯೋಜಿಸಿತ್ತು.
ಸಾಮಾಜಿಕ ಕಾರ್ಯಕರ್ತರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀಯುತ ರುಕ್ಕಯ್ಯ ಪೂಜಾರಿಯವರು ಚಿತ್ರಕಲಾ ಶಿಕ್ಷಕರಾದಂತಹ ಶ್ರೀಮತಿ ರಂಜನಾರವರು ತಯಾರಿಸಿದ ಕಲಾಕೃತಿಯನ್ನು ಅನಾವರಣ ಗೊಳಿಸುವುದರ ಮೂಲಕ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಶುಭಹಾರೈಸಿದರು.
ಅತಿಥಿಗಳಾಗಿ ವಾಲ್ಪಾಡಿ ಪಂಚಾಯತ್ ನ ನಿಕಟಪೂವ೯ ಸದಸ್ಯರಾಗಿರುವ ಯಶೋಧ, ಆಶಾಲತಾ, ಸುಶೀಲ, ಕೋಟಿ ಚೆನ್ನಯ ಸಂಘಟನೆಯ ಸ್ಥಾಪಕ ಅಧ್ಯಕ್ಷ ವಿಶ್ವನಾಥ್ ಕೋಟ್ಯಾನ್, ಅಳಿಯೂರು ಪ್ರೌಢಶಾಲೆಯ ಎಸ್. ಡಿ. ಎಮ್. ಸಿಯ ಅಧ್ಯಕ್ಷರಾದ ರವೀಂದ್ರ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್, ಶಾಲೆಯ ಹಿತೈಷಿಗಳಾದ ಲಕ್ಷ್ಮಣ್ ಸುವರ್ಣ, ಶುಭಕರ್, ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಗಣೀಶ್, ಗ್ರಾಮ ಪ್ರೌಢಶಾಲೆ ಎಸ್.ಡಿ.ಎಮ್.ಸಿ. ಸದಸ್ಯರಾಗಿರುವ ಪ್ರತಿಮ, ಜಯಶ್ರೀ, ಸುಮಿತ್ರ, ಕರುಣಾಕರ್, ಭೋಜ ಹಾಗೂ ಶಾಲಾ ಮುಖ್ಯ ಶಿಕ್ಷಕಿ ವಿನುತ, ಸಹ ಶಿಕ್ಷಕಿ ಮಾಗ೯ರೇಟ್ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳೇ ನಿರ್ವಹಿಸಿದ ಮಳಿಗೆಗಳಲ್ಲಿ ಮನೆಯಲ್ಲೇ ಬೆಳೆದ ತರಕಾರಿ, ಸೊಪ್ಪು, ಪಲ್ಲೆಗಳು, ಹಣ್ಣು ಹಂಪಲು, ಗೃಹೋಪಯೋಗಿ ವಸ್ತುಗಳು ಫ್ಯಾನ್ಸಿ ಹಾಗೂ ಅಲಂಕಾರದ ವಸ್ತುಗಳು, ಸೀರೆ, ಚೂಡೀದಾರದಂತಹ ಉಡುಪುಗಳು, ಲೇಖನಾ ಸಾಮಾಗ್ರಿ, ಅಕ್ವೇರಿಯಂ ಮೀನುಗಳು ಹೀಗೆ ವೈವಿಧ್ಯಮಯ ಮತ್ತು ವಿಶೇಷವಾದ ದಿನನಿತ್ಯ ಬಳಕೆಯ ವಸ್ತುಗಳನ್ನು ವಿದ್ಯಾರ್ಥಿಗಳು ತಮ್ಮ ಮಳಿಗೆಯಲ್ಲಿ ಮಾರಾಟ ಮಾಡಿದರು.
ಇದರೊಂದಿಗೆ ವಿದ್ಯಾರ್ಥಿಗಳು ನಿರ್ವಹಿಸಿದ ಹಲವಾರು ಆಹಾರ ಹಾಗೂ ಆಟದ ಮಳಿಗೆಗಳು ಸಂತೆಯಲ್ಲಿ ಸಂಭ್ರಮೋತ್ಸಹದ ಅಲೆಯನ್ನು ಎಬ್ಬಿಸಿತು. ವಿದ್ಯಾರ್ಥಿಗಳು ತಮ್ಮ ಸ್ವಂತ ಬ್ರ್ಯಾಂಡ್ ರಚಿಸಿ ವಸ್ತುಗಳನ್ನು ಮಾರಾಟ ಮಾಡಿದ್ದು, ಹಣ ವ್ಯವಹಾರಕ್ಕೆ ಕ್ಯೂ-ಅರ್ ಕೋಡ್ ಬಳಕೆ ಮಾಡಿದ್ದು, ಸೃಜನಾತ್ಮಕ ರೀತಿಯಲ್ಲಿ ದರ ಪಟ್ಟಿಯನ್ನು ಪ್ರಸ್ತುತ ಪಡಿಸಿದ್ದು ವಿದ್ಯಾರ್ಥಿಗಳಲ್ಲಿರುವ ಆಧುನಿಕ ವ್ಯಾಪಾರ ತಂತ್ರದ ಅರಿವನ್ನು ಪ್ರತಿಫಲಿಸುತ್ತಿತ್ತು.
ಈ ಮೇಳದಲ್ಲಿ 8ನೇ ಹಾಗೂ 9ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರ 32 ತಂಡಗಳು ಭಾಗವಹಿಸಿದ್ದವು.
ಮೆಟ್ರಿಕ್ ಮೇಳದ ಮಾರಾಟವು ಮದ್ಯಾಹ್ನದ ವರೆಗೆ ನಡೆಯಿತು.
ಹತ್ತಿರದ ಪ್ರಾಥಮಿಕ ಶಾಲೆ, ಪದವಿಪೂರ್ವ ಕಾಲೇಜಿನ ಸಿಬ್ಬಂದಿ, ಶಾಲೆಯ ಸಮಸ್ತ ಪೋಷಕರು, ವಿದ್ಯಾರ್ಥಿಗಳೊಂದಿಗೆ ಊರಿನ ಜನರು ಈ ಸಂತೆಯಲ್ಲಿ ಭಾಗವಹಿಸಿ ಈ ಸಂತೆಯ ದೊಡ್ಡ ಮಟ್ಟದ ಯಶಸ್ಸಿಗೆ ಕೊಡುಗೆ ನೀಡಿದರು.
ಮೆಟ್ರಿಕ್ ಮೇಳವನ್ನು ಆಯೋಜಿಸಿದ ಗ್ರಾಹಕ ಸಂಘದ ಸಂಚಾಲಕ ಡಾ. ಆನಿ ಡಿಂಪಲ್ ಕ್ಯಾಸ್ತಲಿನೊ ಅವರು ಕಾಯ೯ಕ್ರಮ ನಿರೂಪಿಸಿ ಸ್ವಾಗತಿಸಿದರು.


0 Comments