ರೂ 10 ಕೋ. ವೆಚ್ಚದಲ್ಲಿ ನಿಮಾ೯ಣಗೊಂಡಿರುವ ಮೂಲ್ಕಿ ತಾಲೂಕು ಆಡಳಿತ ಕೇಂದ್ರ ಪ್ರಜಾ ಸೌಧ ಲೋಕಾರ್ಪಣೆ

ಜಾಹೀರಾತು/Advertisment
ಜಾಹೀರಾತು/Advertisment
ರೂ 10 ಕೋ. ವೆಚ್ಚದಲ್ಲಿ ನಿಮಾ೯ಣಗೊಂಡಿರುವ ಮೂಲ್ಕಿ ತಾಲೂಕು ಆಡಳಿತ ಕೇಂದ್ರ ಪ್ರಜಾ ಸೌಧ ಲೋಕಾರ್ಪಣೆ 
ಮೂಡುಬಿದಿರೆ : ಜನರ ಸಮಸ್ಯೆಗೆ ಪಕ್ಷಾತೀತವಾಗಿ ಸ್ಪಂದನೆ ಮಾಡುವ ಮೂಲಕ ಜನರ ಬದುಕು ಹಸನು ಮಾಡುವುದು ಸರಕಾರ ಮತ್ತು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಸರಕಾರ ಪ್ರಜೆಗಳಿಗೋಸ್ಕರ ಇರುವುದು ಎಂಬ ನಿಟ್ಟಿನಲ್ಲಿ ತಹಶಿಲ್ದಾರ್ ಕಚೇರಿಯನ್ನು ಪ್ರಜಾ ಸೌಧ ಎಂದು ನಾಮಕರಣ ಮಾಡಲಾಗಿದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಅವರು ದ.ಕ.ಜಿಲ್ಲಾಡಳಿತ ಮತ್ತು ಕರ್ನಾಟಕ ಗೃಹ ಮಂಡಳಿ, ಸಂಯುಕ್ತ ಆಶ್ರಯದಲ್ಲಿ ಮುಲ್ಕಿ ಕಾರ್ನಾಡಿನ ಗೇರುಕಟ್ಟೆಯಲ್ಲಿ ಸುಮಾರು 1.30ಎಕ್ರೆ ಪ್ರದೇಶದಲ್ಲಿ ಬಹು ಸುಸಜ್ಜಿತವಾಗಿ ಸುಮಾರು10 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡ ತಾಲೂಕು ಆಡಳಿತ ಕೇಂದ್ರ ಪ್ರಜಾ ಸೌಧ , 
ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮುಲ್ಕಿ ತಾಲೂಕಿನ ಜನರ ಬಹುದಿನಗಳ ಕನಸಾದ ಮೂಲ್ಕಿ ತಾಲೂಕು ನಿರ್ಮಾಣದ ಜೊತೆಗೆ ಸರಕಾರ ಜನರ ಬಳಿ ಬಂದು ಮೂಲ ಸೌಕರ್ಯ ನೀಡುವ ತಾಲೂಕು ಆಡಳಿತ ಕೇಂದ್ರ ಪ್ರಜಾ ಸೌಧವನ್ನು ಲೋಕಾರ್ಪಣೆ ಮಾಡುವ ಮೂಲಕ ಜನರ ಆಶೋತ್ತರಗಳನ್ನು ಪೂರೈಸುವ ಪ್ರಯತ್ನ ಮಾಡಿದ್ದೇವೆ ಎಂದರು
ಅವರು ಮಾತನಾಡಿ ಪ್ರಜಾಸೌಧದ ಅವರಣ ಹಾಗೂ ಇನ್ನಿತರ ಕಾಮಗಾರಿಗಳಿಗಾಗಿ ಹೆಚ್ಚುವರಿಯಾಗಿ 1.60 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು. ಕಂದಾಯ ಇಲಾಖೆಯ ಭೂದಾಖಲೆಗಳನ್ನು ಡಿಜಿಟಲೀಕರಣ ಗೊಳಿಸುವ ಮೂಲಕ ದಾಖಲೆಗಳು ಹಾಗೂ ನಕ್ಷೆಗಳ ಪ್ರತಿಗಳ ತಕ್ಷಣ ಆನ್‌ಲೈನ್ ಮೂಲಕ ಲಭ್ಯವಾಗಿವಂತೆ ಮಾಡಲಾಗುತ್ತಿದ್ದು ಕಂದಾಯ ಇಲಾಖೆ ಭ್ರಷ್ಟಾಚಾರ ಮುಕ್ತ ಗೊಳಿಸುವಿಕೆಯಲ್ಲಿ ಶೇ100 ಶ್ರಮ ವಹಿಸಲಾಗುವುದು ಎಂದರು. ಎಸಿ ಮತ್ತು ಡಿಸಿ ಕೋರ್ಟುಗಳಲ್ಲಿ ನೆನೆಗುದಿಗೆ ಬಿದ್ದಿದ್ದ ಕೇಸುಗಳ ಶೀಘ್ರ ವಿಲೇವಾರಿ ಸಹಿತ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯ ನಡೆಯುತ್ತಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ 37 ಹಳ್ಳಿಗಳಲ್ಲಿ ಕೃಷಿಭೂಮಿ ಮಾರಾಟದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ,ಕಡಬ ಮತ್ತಿತರ ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಕಂದಾಯ ಹಾಗೂ ರೈತರ ಭೂಮಿ ವಿವಾದ ಸಮಸ್ಯೆ ಬಗೆಹರಿಸಲಾಗುವುದು ಎಂದರು
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಮಾತನಾಡಿ, ರಾಜ್ಯ ಸರಕಾರ ಜನಸ್ನೇಹಿ ಆಡಳಿತಕ್ಕೆ ಹುತ್ತು ನೀಡುತ್ತಿದ್ದು ಜನರಿಗೆ ಸವಾಲತ್ತುಗಳನ್ನು ಒದಗಿಸಲು ಪ್ರಜಾಸೌಧ ಮುಖ್ಯ ಪಾತ್ರ ವಹಿಸಲಿದೆ. ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯ ಮೂಲಕ ಕಂದಾಯ ಇಲಾಖೆಯನ್ನು ಅಧುನೀಕರಣ ಗೊಳಿಸಿ ಭ್ರಷ್ಟಾಚಾರ ಮುಕ್ತವಾಗುವಂತೆ ರೂಪಿಸುವಲ್ಲಿ ಕೃಷ್ಣ ಬೈರೇಗೌಡರ ಕಾರ್ಯ ಅಭಿನಂದನೀಯ. ಮುಂದಿನ ದಿನಗಳಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ 70 ಕೋಟಿ ವೆಚ್ಚದ ನೂತನ ಒಪಿಡಿ ಸಹಿತ ವಿವಿಧ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ವತ್ರೆಗಳಲ್ಲಿ ಸಿಬ್ಬಂದಿ ಸಹಿತ ವ್ಯವಸ್ಥಿತವಾಗಿರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯನ್ನು ಉನ್ನತೀಕರಣದ ಯೋಜನೆಯಡಿ ತಲಪಾಡಿಯಿಂದ ಕುಂದಾಪುರದ ವರೆಗೆ ಸರ್ವಿಸ್ ರಸ್ತೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಇನ್ನುಳಿದಂತೆ ಅಫಘಾತ ಪ್ರದೇಶಗಳಾದ ಹಳೆಯಂಗಡಿ ಮುಲ್ಕಿ ಮುಂತಾದ ಕಡೆಗಳಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಯೋಜನೆ ಪರಿಶೀಲನೆಯಲ್ಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಎ. ಕೋಟ್ಯಾನ್ ಮಾತನಾಡಿ, ಮುಲ್ಕಿ ಭಾಗದ ಹಿರಿಯರ ತಾಲೂಕು ನಿರ್ಮಾಣ ಹೋರಾಟಕ್ಕೆ ಇಂದು ಫಲ ಲಭಿಸಿದೆ. ಅನುದಾನ ಕ್ರೋಡೀಕರಣೆಯಲ್ಲಿ ಸಹಕರಿಸಿದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್‌ರವರನ್ನು ಸ್ಮರಿಸುವುದು ಬಹಳ ಅಗತ್ಯ ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ಸಹಿತ ಶಾಸಕರ ಕೊಠಡಿ ಇದ್ದು ವಾರದಲ್ಲಿ ಒಂದು ದಿನ ಜನರಿಗಾಗಿ ಲಭ್ಯವಿರುತ್ತೇನೆ. ಮುಂದಿನ ಅಗತ್ಯತೆಗಳಿಗಾಗಿ ನ್ಯಾಯಾಲಯ ಮತ್ತು ಅಗ್ನಿಶಾಮಕ ದಳ ನಿರ್ಮಾಣಕ್ಕಾಗಿ ಸ್ಥಳ ಕಾದಿರಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್,ವಿಧಾನ ಪರಿಷತ್ ಶಾಸಕ ಕಿಶೋರ್ ಬಿ.ಆರ್ , ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ. ಎ. ಗಪೂರ್,ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ. ಎಂ. ಶಾಹೀದ್ ತೆಕ್ಕಿಲ್, ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ,ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತ ಡಿ ಎಸ್ ಗಟ್ಟಿ, ದ ಕ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ,ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ , ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಉಪಸ್ಥಿತರಿದ್ದರು. 
ಕಾರ್ಯಕ್ರಮದಲ್ಲಿ ಮುಲ್ಕಿ ಮತ್ತು ಮೂಡುಬಿದಿರೆ ತಾಲೂಕು ವ್ಯಾಪ್ತಿಯ 94ಸಿ ಮತ್ತು 94ಸಿಸಿ ಯಡಿ 300 ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. 
ಮುಲ್ಕಿ ಪ್ರಜಾಸೌಧ ನಿರ್ಮಾಣಕ್ಕೆ ಸಹಕಾರ ನೀಡಿದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್‌ರವರನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ಶ್ರೀದೇವಿಯ ಬೆಳ್ಳಿಯ ಫೋಟೋ ಮತ್ತು ವಿಶೇಷ ಶೇಷವಸ್ತ್ರದೊಂದಿಗೆ ಗೌರವಿಸಲಾಯಿತು. ಕಟ್ಟಡದ ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಅಭಿನಂದಿಸಲಾಯಿತು. 
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸ್ವಾಗತಿಸಿ ಪ್ರಸ್ತಾವಿಸಿದರು.ಡಾ. ಮಂಜುಳಾ ಶೆಟ್ಟಿ ನಿರೂಪಿಸಿದರು, ,ಮುಲ್ಕಿ ತಹಶೀಲ್ದಾರ ಶ್ರೀಧರ ಮುಂದಲಮನಿ ಧನ್ಯವಾದ ಅರ್ಪಿಸಿದರು.

Post a Comment

0 Comments