ಸಂಪರ್ಕ ರಸ್ತೆಯನ್ನು ಉಳಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ
* ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಮನವಿ
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭ ಗ್ದಾಮಸ್ಥರು ಓಡಾಡುವ ಸಂಪರ್ಕ ರಸ್ತೆಯನ್ನು ಮುಚ್ಚದೆ ಗ್ರಾಮೀಣ ರಸ್ತೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಅಲ೦ಗಾರು ಪೋಯ್ಯೆದಪಲ್ಕೆ, ಕಾನ, ಅ೦ಬೂರಿ, ಮ೦ಜನಕಟ್ಟೆ,ಬೆಳುವಾಯಿ, ಗ್ರಾಮದ ಗ್ರಾಮಸ್ಥರು ಬುಧವಾರ ಪೋಯ್ಯದಪಲ್ಕೆ ಎಂಬಲ್ಲಿ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಇಂತಹ ಫೈ ಓವರ್ಗಳ ಕಾಮಗಾರಿಗಳು ಜನರಿಗೆ ತೊಂದರೆಯಾಗುತ್ತಿವೆ. ಈ ಮಾರ್ಗಕ್ಕೆ ಅಂಡರ್ಪಾಸ್ ಮಾರ್ಗವನ್ನಾದರೂ ನಿರ್ಮಿಸಿ ಕೊಡಬೇಕು. ಸಂಪೂರ್ಣವಾಗಿ ಈ ರಸ್ತೆ ಮುಚ್ಚಬಾರದು. ಇಂತಹ ಅನ್ಯಾಯದ ವಿರುದ್ಧ ಹೋರಾಡಲು ಮೂಡುಬಿದಿರೆಯ ಜನತೆ ಒಗ್ಗಟ್ಟಾಗಿರಬೇಕು. ನಾನು ನಿಮ್ಮ ಜತೆಗಿದ್ದೇನೆ ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ ನಾನು ಉಪವಾಸ ಮಾಡಲು ಅಥವಾ ಜೈಲಿಗೆ ಹೋಗಲು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸಾರ್ವಜನಿಕರ ಆವಶ್ಯಕತೆಗಳಿಗೆ ಸ್ಪಂದಿಸಲು ಅಂಡರ್ ಪಾಸ್ ಮಾರ್ಗವನ್ನು ನಿರ್ಮಿಸಿಕೊಡುವಂತೆ ಎನ್ಹೆಚ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಪಂಚಾಯತ್ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ, ಭವಿಷ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯ ಅಗತ್ಯವಿಲ್ಲದಂತೆ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಈ ರಸ್ತೆಯ ಮೂಲಕ ದಿನಂಪ್ರತಿ ಸಾವಿರಾರು ಜನರು ಓಡಾಡುತ್ತಿದ್ದಾರೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು,ಆಸ್ಪತ್ರೆ, ಮಸೀದಿ, ಚಚ್ ೯ ಮತ್ತು ದೇವಸ್ಥಾನಗಳಿಗೆ ಹೋಗಿ ಬರುವ ಜನರಿಗೆ ಬಹಳ ಅನುಕೂಲವಾಗಿತ್ತು. ಇಲ್ಲಿ 450 ಕುಟುಂಬಗಳಿದ್ದು ಅವರಿಗೆ ತೊಂದರೆಯಾಗದಂತೆ ರಾ.ಹೆ. ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ದ ಗ್ರಾಮಸ್ಥರು ಪ್ರತಿಭಟನೆಗೆ ಸ್ಪಂದನೆ ಹಾಗೂ ಪರಿಹಾರ ದೊರಕದಿದ್ದರೆ ಅನಿರ್ದಿಷ್ಟಾವದಿ ಪ್ರತಿಭಟನೆಯನ್ನು ಮಾಡುವುದಾಗಿ ಗ್ರಾಮಸ್ಥರು ಒಕ್ಕೊರಲಿನಿಂದ ಘೋಷಿಸಿದರು.
ತಮ್ಮ ಬೇಡಿಕೆಗಳನ್ನು ಕೂಡಲೇ ಪರಿಗಣಿಸುವಂತೆ ಗ್ರಾಮಸ್ಥರು ತಮ್ಮ ಮನವಿ ಪತ್ರಗಳನ್ನು ಎನ್ಹೆಚ್ ಅಧಿಕಾರಿಗಳಿಗೆ, ಪಡುಮಾರ್ನಾಡು ಮತ್ತು ಬೆಳುವಾಯಿ ಗ್ರಾಮ ಪಂಚಾಯತ್ ಗೆ ಮನವಿಸಲ್ಲಿಸಿದರು. ರಾ.ಹೆ.ಇಲಾಖೆಯ ಪ್ರಸಾದ್, ಬಾಲಾಜಿ, ಮೂಡುಬಿದಿರೆ ಪುರಸಭೆಯ ಹಿರಿಯ ಸದಸ್ಯ ಪಿ.ಕೆ. ಥೋಮಸ್, ಬೆಳುವಾಯಿ ಗ್ರಾ. ಪಂಚಾಯತ್ ಸದಸ್ಯ ಭರತ್ ಶೆಟ್ಟಿ, ಪಡುಮಾರ್ನಾಡು ಪಂಚಾಯತಿಯ ಪಿಡಿಒ ಸಾಯೀಶ್ ಚೌಟ, ಸದಸ್ಯ ಸೂರಜ್, ಮಾಜಿ ಸದಸ್ಯ ಮಹಮ್ಮದ್ ಅಸ್ಲಾಂ, ವಾಡ್ ೯ ಸದಸ್ಯರು ಈ ಸಂದರ್ಭದಲ್ಲಿದ್ದರು.
ಡೆನಿಸ್ ಪಿರೇರಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ೧೦೦ ಕ್ಕೂ ಅಧಿಕ ಗ್ರಾಮಸ್ಥರು ಭಾಗವಹಿಸಿದ್ದರು.
0 Comments