ಮೂಡುಬಿದಿರೆಯಲ್ಲಿ 71 ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಕ್ಕೆ ಚಾಲನೆ
"ಕಲ್ಪವೃಕ್ಷ"ಪ್ರಶಸ್ತಿ ಸ್ವೀಕರಿಸಿದ ಗಣೇಶ್ ನಾಯಕ್
ಮೂಡುಬಿದಿರೆ: ಪ್ರಜಾಪ್ರಭುತ್ವದ ಸ್ಥಂಭಗಳಲ್ಲಿ ಒಂದಾದ ಸಹಕಾರ ಚಳುವಳಿ ಅದು ರಾಜಕೀಯದ ಸರಕಾರವಾಗಬಾರದು. ಸಾಮುದಾಯಿಕ, ನಿಸ್ಪಕ್ಷಪಾತ, ನಿರ್ವಂಚನೆಯ, ಸ್ವಹಿತಾಸಕ್ತಿರಹಿತ, ಪಾರದರ್ಶಕತೆಯ ಮೌಲ್ಯಗಳಿಂದ ಕೂಡಿರಬೇಕು ಎಂದು ಮಾಜಿ ಮುಖ್ಯ ಮಂತ್ರಿ , ಮಾಜಿ ಕೇಂದ್ರ ಸಚಿವ, ಮೂಡುಬಿದಿರೆಯ ಮಣ್ಣಿನ ಮಗ ಎಂ. ವೀರಪ್ಪ ಮೊಯ್ಲಿ ಹೇಳಿದರು.
ಅವರು ಗುರುವಾರ ಸಂಜೆ ೧೦೮ ವರ್ಷಗಳ ಇತಿಹಾಸವಿರುವ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ 71 ನೇ ಸಹಕಾರ ಸಪ್ತಾಹ ಸಂಭ್ರಮ -೨೦೨೪ ಸಪ್ತ ಸಂಧ್ಯಾ- ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವನಾಗಿ ಭಾರೀ ವ್ಯವಹಾರ ಸಂಸ್ಥೆಗಳ ಲಾಭಾಂಶವನ್ನು ಗ್ರಾಮೀಣ ಭಾರತಕ್ಕೆ ಹಂಚುವ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿ.ಎಸ್. ಆರ್. ಫಂಡ್ ) ಪರಿಕಲ್ಪನೆಯನ್ನು ತಾನು ಜಾರಿಗೊಳಿಸಲು ಮೂಡುಬಿದಿರೆ ಸೊಸೈಟಿ ಬ್ಯಾಂಕಿನ ಸೇವಾ ಮನೋಭಾವ, ಮೂಡುಬಿದಿರೆಯ ತವರು ನೆಲ ತನಗೆ ಸ್ಫೂರ್ತಿಯಾಗಿತ್ತು.
ಈ ಸೊಸೈಟಿ ನಾಡಿಗೆ ಮಾತ್ರವಲ್ಲ ರಾಷ್ಟ್ರಕ್ಕೆ ಮಾದರಿಯಾಗಿ ಬೆಳೆದಿರುವ ಬಗ್ಗೆ ಅಭಿಮಾನವಿದೆ ಎಂದ ಅವರು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ನಬಾರ್ಡ್ ಮೂಲಕ ರೈತರಿಗೆ ಆರ್ಥಿಕ ಚೈತನ್ಯ ನೀಡುವಲ್ಲಿ ತನ್ನ ಸಲಹೆ ಅನುಷ್ಠಾನವಾಗಿತ್ತು ಎಂದರು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ತಮ್ಮ ಆಶೀರ್ವಚನ ನೀಡಿ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ವಿವಿಧ ರೀತಿಯಿಂದ ತಮ್ಮ ಬದುಕು ಕಟ್ಟಿಕೊಂಡಿವೆ. ಅದರಂತೆ ಮನುಷ್ಯರು ಆರ್ಥಿಕವಾಗಿ ಬಲಗೊಳ್ಳಲು ಸಹಕಾರ ಕೇಂದ್ರಗಳು ಭರವಸೆಯ ನಿಜ ಕೇಂದ್ರಗಳಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.
ಸೊಸೈಟಿಯ ಅಧ್ಯಕ್ಷ ಎಂ ಬಾಹುಬಲಿ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೊಸೈಟಿಯಲ್ಲಿ ಕಳೆದ 53 ವರ್ಷಗಳಿಂದ ನಿರ್ದೇಶಕರಾಗಿ, ಅಧ್ಯಕ್ಷರು, ಉಪಾಧ್ಯಕ್ಷರು, ಇತ್ಯಾದಿ ಕಾರ್ಯವನ್ನು ನಿರ್ವಹಿಸಿ ಸೊಸೈಟಿಯನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದ ಎಂ ಗಣೇಶ್ ನಾಯಕ್ ಅವರಿಗೆ "ಕಲ್ಪವೃಕ್ಷ" ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಚಿನ್ನದ ಪದಕ, ಬೆಳ್ಳಿಯ ಫಲಕ, ರೂ 25000 ನಗದು, ಶಾಲು ಫಲಪುಷ್ಪವನ್ನು ಪ್ರಶಸ್ತಿಯು ಒಳಗೊಂಡಿತು.
ಆರ್ಥಿಕ ನೆರವು: ನಾಲ್ಕು ದೇವಾಲಯಗಳಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು.
ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ, ಮಂಗಳೂರು ಡಿ ಆರ್ ಪಿ ಎಸ್ ನ ಡಾ. ರಮೇಶ್, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ಎಂ ಸಿ ಎಸ್ ಸೊಸೈಟಿಯ ವಿಶೇಷ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಚಂದ್ರಶೇಖರ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆರಾಲ್ಡ್ ತಾವ್ರೋ ಪ್ರಾರ್ಥಿಸಿದರು. ಉಪನ್ಯಾಸಕಿ ಚೇತನಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಜಯರಾಮ್ ಕೋಟ್ಯಾನ್ ವಂದಿಸಿದರು.
ಇದಕ್ಕೂ ಮೊದಲು ಶಾರ್ವರಿ ಪಿ ದೇವಾಡಿಗ ಅವರಿಂದ ವಾದ್ಯ ನೀನಾದ ಹಾಗೂ ನಂತರ ಯಕ್ಷನಿಧಿ ಇವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.
0 Comments