ಮೂಡುಬಿದಿರೆ: ಕಾಳಿಕಾಂಬಾ ಸೇವಾ ಸಮಿತಿಯಿಂದ ವಿದ್ಯಾರ್ಥಿವೇತನ ವಿತರಣೆ
ಮೂಡುಬಿದಿರೆ : ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಪುಷ್ಪಪೂಜೆಯ ಅಂಗವಾಗಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ವತಿಯಿಂದ ೨೭ನೇ ವರ್ಷದ ಕಾರ್ಯಕ್ರಮವಾಗಿ ಸಂಯೋಜಿಸಲಾದ ತಾಳಮದ್ದಳೆಯ ಪೂರ್ವಭಾವಿಯಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ, ಮಳೆಹಾನಿ ಸಂತ್ರಸ್ತರಿಗೆ ಸಹಾಯಧನ ವಿತರಿಸಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ, ಪುರೋಹಿತ ಎನ್.ಜಯಕರ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ ಕಲಾವಿದ, ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಅವರು ಮಾತನಾಡಿ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಫಲಪ್ರದವಾಗುವಲ್ಲಿಯೇ ವ್ಯಕ್ತಿ, ಲೋಕದ ಹಿತವಡಗಿದೆ. ಆ ಕಾಳಜಿಯಿಂದ ಕಾರ್ಯನಿರ್ವಹಿಸುವಲ್ಲಿಯೇ ನಮ್ಮ ಜೀವನದ ಸಾರ್ಥಕ್ಯವಿದೆ.
ಅಂತೆಯೇ, ಕಲಾರಾಧನೆ ಎಂದರೆ ದೇವತಾರಾಧನೆ ಎಂದೇ ಬಗೆದು ಅದರಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುವ ವಿಶ್ವಕರ್ಮ ಸಮಾಜ, ಈ ದೇವಸ್ಥಾನದವರು, ಸಮಿತಿಯವರು ಈ ಸತ್ಸಂಪ್ರದಾಯವನ್ನು ಬಿಡದೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ.
ಅತಿಥಿಗಳಾಗಿ ದೇವಸ್ಥಾನದ ಮೊಕ್ತೇಸರರಾದ ಎಂ.ಕೆ. ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಭಾಗವಹಿಸಿದ್ದರು. ಸೇವಾಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಪಾಸಾಗಿ ಶಿಕ್ಷಣ ಮುಂದುವರಿಸುತ್ತಿರುವ ಸಮಾಜದ ೧೧ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಸದಸ್ಯ ವಿಕ್ರಂ ನಾರಂಪಾಡಿ ಮತ್ತು ರೇವತಿ ಗುಂಡ್ಯಡ್ಕ ಇವರ ಮನೆಗಳಿಗೆ ಮಳೆಯಿಂದಾಗಿ ಹಾನಿಯಾಗಿರುವ ಬಗ್ಗೆ ಸಹಾಯಧನ ವಿತರಿಸಲಾಯಿತು.
ಬೇಲಾಡಿ ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಸಿದ್ಧ ಕಲಾವಿದರಿಂದ `ಗದಾಯುದ್ಧ 'ಯಕ್ಷಗಾನ ತಾಳಮದ್ದಳೆ ಜರಗಿತು.
0 Comments