ತೆಂಕ ಮಿಜಾರು ಗ್ರಾ.ಪಂ. ಮಹಿಳೆ ಮತ್ತು ಮಕ್ಕಳ ಗ್ರಾಮಸಭೆ
* ಶಾಲಾ ಆವರಣದಲ್ಲಿ ಗುಟ್ಕಾ ಪ್ಯಾಕೆಟ್ ವಿದ್ಯಾರ್ಥಿಯಿಂದ ದೂರು
ಮೂಡುಬಿದಿರೆ : ಶಾಲಾ ಆವರಣದಿಂದ ನೂರು ಮೀಟರ್ ನಷ್ಟು ದೂರದ ವರೆಗೆ ಯಾವುದೇ ಅಮಲು ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ಇದೆ ಆದರೆ ನಮ್ಮ ಶಾಲೆಯ ಆವರಣದಲ್ಲಿಯೇ ಗುಟ್ಕಾ ಪ್ಯಾಕೆಟ್ ಗಳು ಕಾಣ ಸಿಗುತ್ತಿವೆ ಇದಕ್ಕೆ ಏನು ಮಾಡುವುದು ಎಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನೀರ್ಕೆರೆ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ಸ್ವಸ್ತಿಕ್ ಪಂಚಾಯತ್ ನ ಗಮನ ಸೆಳೆದರು.
ಅವರು ತೆಂಕಮಿಜಾರು ಗ್ರಾಮ ಪಂಚಾಯತ್ ವತಿಯಿಂದ ಸಂತೆಕಟ್ಟೆ ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ಮಹಿಳೆ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿ ಸಮಸ್ಯೆಯನ್ನು ಸಭೆಯ ಮುಂದಿಟ್ಟರು.
ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ. ನೀಡಿದರು.
ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಕೆ. ಸಾಲಿಯಾನ್ ಉಪಸ್ಥಿತಿಯಲ್ಲಿ ನಡೆದ ಗ್ರಾಮಸಭೆಯನ್ನು
ಗ್ರಾ. ಪಂ. ವ್ಯಾಪ್ತಿಯ ೭ ಶಾಲೆಗಳ ವಿದ್ಯಾರ್ಥಿಗಳು ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಶಾಲೆಯಲ್ಲಿ ನೀರು ಪೂರೈಕೆ ಸಮಸ್ಯೆ ಇದೆ, ಬಂಗಬೆಟ್ಟು ಶಾಲಾವರಣ ಗೋಡೆ ಇಲ್ಲದೆ ಮಕ್ಕಳು ಬೆಳೆಸಿದ ಹೂ, ತರಕಾರಿ ತೋಟಕ್ಕೆ ದನಗಳು ಬಂದು ತಿಂದು ಹಾಕುತ್ತಿವೆ ಇದಕ್ಕೆ ರಕ್ಷಣೆ ಒದಗಿಸಬೇಕಾಗಿದೆ. ಕುಕ್ಕುದಕಟ್ಟೆ, ಪೂಮಾವರ ಕಡೆಗೆ ಬಸ್ಸು ಸೌಲಭ್ಯ ಬೇಕು, ತೋಡಾರು ಜಂಕ್ಷನ್ನಲ್ಲಿ ಎಕ್ಸ್ಪ್ರೆಸ್ ಬಸ್ಸುಗಳು ನಿಲ್ಲಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಕ್ಕಳು ಸಭೆಯ ಗಮನ ಸೆಳೆದರು. ಈ ಸಮಸ್ಯೆಗಳ ಬಗ್ಗೆ ಶೀಘ್ರವಾಗಿ ಕ್ರಮವಹಿಸುವುದಾಗಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಪಂ. ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ. ಭರವಸೆ ಇತ್ತರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಧವಳಾ ಕಾಲೇಜಿನ ಪ್ರಾಧ್ಯಾಪಕ ಸಂತೋಷ ಶೆಟ್ಟಿ ಅವರು ಮಕ್ಕಳ ಹಕ್ಕು ಮತ್ತು ರಕ್ಷಣೆ ಯ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯೋಜಕಿ ಕಾತ್ಯಾಯನಿ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ರೇಖಾ ಮಕ್ಕಳ ಆರೋಗ್ಯ ಮತ್ತು ರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಸಂಜೀವಿನಿ ಒಕ್ಕೂಟದ ತಾಲೂಕು ಸಂಯೋಜಕ ಅಶೋಕ್ ಮಾತನಾಡಿ ಮನೆಯಲ್ಲಿ ಮಕ್ಕಳನ್ನು ಹೆಣ್ಣು-ಗಂಡೆಂಬ ಬೇಧ ಮಾಡದೆ ಸಮಾನವಾಗಿ ಕಾಣುವಂತೆ ಹೇಳಿದರು.
ಗ್ರಾ.ಪಂ. ಅಧ್ಯಕ್ಷರು ಮಕ್ಕಳಿಗೆ ಹಿತವಚನ ಹೇಳಿದರು. ಪಂ.ಸದಸ್ಯರು, ದ್ವಿ.ದ.ಲೆ.ಸಹಾಯಕರು ಉಪಸ್ಥಿತರಿದ್ದರು.. ಸಿಬ್ಬಂದಿ ರಾಕೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments