ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಉದ್ಘಾಟನೆ
ಮೂಡುಬಿದಿರೆ : ಜನಪ್ರತಿನಿಧಿ ತಮ್ಮ ಮತಕ್ಷೇತ್ರಕ್ಕೆ, ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದನ್ನು ಮಾಡಬೇಕು. ಅದಕ್ಕೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಯುವಜನತೆಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿದೆ ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಜವಾಬ್ದಾರಿ ಮೂಡಿಸುವುದು ಯುವ ಸಂಸತ್ತಿನ ಆಶಯ’ ಎಂದು ಶಾಸಕ ಉಮಾನಾಥ್.ಏ.ಕೋಟ್ಯಾನ್ ಹೇಳಿದರು.
ಅವರು ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಇಲ್ಲಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ ‘ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜದ ಅಭಿವೃದ್ಧಿ ನಿಟ್ಟಿನಲ್ಲಿ ಶಾಸನಗಳನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಮುಖ್ಯವಾಗಿ ಮಾಡಬೇಕು.
‘ಸದ್ಯದ ಸ್ಥಿತಿಗತಿಯಲ್ಲಿ ನೋಟಿನ ಮೂಲಕ ವೋಟನ್ನು ವಿನಿಮಯ ಮಾಡಿಕೊಳ್ಳುವ ತರಾತುರಿಯಲ್ಲಿ ಜನಪ್ರತಿನಿಧಿಗಳಿದ್ದಾರೆ. ಆದರೆ, ಜನಪ್ರತಿನಿಧಿಗಳು ಸಮಾಜಕ್ಕೆ ಮಾದರಿ ಕೆಲಸ ಮಾಡಬೇಕು ಎಂಬ ಆಶಯದಲ್ಲಿ ಮತದಾರರು ಮತ ಹಾಕಿರುತ್ತಾರೆ’ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ದೇಶದ ಹಲವು ಸಂಪತ್ತುಗಳಲ್ಲಿ ಯುವ ಸಂಪತ್ತು ಅಮೂಲ್ಯವಾದದ್ದು. ದೇಶದಲ್ಲಿ ೪೫ಕೋಟಿ ವಿದ್ಯಾರ್ಥಿಗಳಿದ್ದು, ಯುವ ಸಂಪತ್ತು ಒಳ್ಳೆಯ ದಾರಿಯಲ್ಲಿ ಸಾಗುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿಸುವ ಕಾರ್ಯವನ್ನು ಈ ರೀತಿಯ ಕಾರ್ಯಕ್ರಮಗಳು ಮಾಡಬಲ್ಲದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜುಗಳ ಸುಮಾರು ೨,೦೦೦ ವಿದ್ಯಾರ್ಥಿಗಳು ಪಾಲ್ಗೊಂಡರೆ ಮುಂದಿನ ವರ್ಷವು ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
೨೦೨೩ರ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಫರ್ಧೆಯಲ್ಲಿ ದಕ್ಷಿಣ ಕನ್ನಡದ ೨೭ ಕಾಲೇಜಿನ ೫೪ ವಿದ್ಯಾರ್ಥಿಗಳು ಭಾಗವಹಿಸಿದ್ದು, ‘’ಒಂದು ದೇಶ ಒಂದು ಚುನಾವಣೆ’’ ಕರಡು ಮಸೂದೆಯ ಕುರಿತು ಚರ್ಚಿಸಲಾಯಿತು. ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಕೆನರಾ ಪ.ಪೂ ಕಾಲೇಜಿನ ಆಕಾಶ್ ಎಂ ರಾವ್ ಪ್ರಥಮ ಹಾಗೂ ಎಸ್ಡಿಎಂ ಪ.ಪೂ ಕಾಲೇಜಿನ ಶ್ರೇಯಾ ಎಚ್.ಎ ದ್ವಿತೀಯ ಸ್ಥಾನ ಪಡೆದರು. ಜತೆಯಲ್ಲಿ ೮ ಜನ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಗದಗದಲ್ಲಿ ಜರುಗಲಿರುವ ರಾಜ್ಯ ಮಟ್ಟ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಟಿ. ಎನ್.ಧ್ರುವಕುಮಾರ್ ದಿಕ್ಸೂಚಿ ಭಾಷಣ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಚಂದ್ರನಾಥ, ಮಂಗಳೂರಿನ ಗೋರಿಗುಡ್ಡ ಕಿಟಲ್ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ವಿಠಲ ಎ. ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಮೊಹಮ್ಮದ್ ಸದಾಕತ್ ಸ್ವಾಗತಿಸಿದರು. ಆಳ್ವಾಸ್ ಕಾಲೇಜಿನ ಪದವಿ ಕನ್ನಡ ವಿಭಾಗದ ಮುಖ್ಯಸ್ಥ ಡಾಯೋಗೀಶ್ ಕೈರೋಡಿ, ಆಳ್ವಾಸ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಷ್ ಚಿಪ್ಳೂಣಕರ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ದ.ಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ(ಪ.ಪೂ) ಉಪನಿರ್ದೇಶಕ ಜಯಣ್ಣ ಸಿ.ಡಿ. ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಬೇಕು. ಶಿಕ್ಷಣದ ನಂತರ ಉದ್ಯೋಗ ನಿಮ್ಮನ್ನು ಅರಸಿ ಬರಬೇಕು. ಅಂತಹ ವ್ಯಕ್ತಿತ್ವ ಬೆಳಸಿಕೊಳ್ಳಬೇಕು ಎಂದರು. ಆಳ್ವಾಸ್ ಪದವಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಯುವ ಸಂಸತ್: ಕಲಾಪದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಅನ್ವಿತಾ ಎಂ. (ಸಭಾಧ್ಯಕ್ಷ), ಬಿ.ಸಿ.ರೋಡ್ ಕಾರ್ಮೆಲ್ ಪಿಯು ಕಾಲೇಜಿನ ರಾನ್ಸ್ನ್ (ಪ್ರಧಾನ ಮಂತ್ರಿ), ಮಂಗಳೂರಿನ ಪದವು ಕಾಲೇಜಿನ ಉದಯ ಕುಮಾರ್ (ವಿರೋಧ ಪಕ್ಷದ ನಾಯಕ) ಪ್ರಮುಖವಾಗಿ ಪಾಲ್ಗೊಂಡರು. ಹಣಕಾಸು, ರಕ್ಷಣಾ, ಶಿಕ್ಷಣ, ರೈಲ್ವೆ ಸೇರಿದಂತೆ ಒಟ್ಟು ೧೨ ಸಚಿವಾಲಯಗಳ ಸಚಿವರಾಗಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
0 Comments