ಮರೆಯಾದ ಶತಾಯುಷಿ, ನಗುಮೊಗದ ಮಿಜಾರುಗುತ್ತು ಆನಂದ ಆಳ್ವ

ಜಾಹೀರಾತು/Advertisment
ಜಾಹೀರಾತು/Advertisment

 ಮರೆಯಾದ  ಶತಾಯುಷಿ, ನಗುಮೊಗದ  ಮಿಜಾರುಗುತ್ತು  ಆನಂದ ಆಳ್ವ 







ಮೂಡುಬಿದಿರೆ: ಧಾರ್ಮಿಕ ಮುಂದಾಳು, ಕೃಷಿಕ, ಸಂಘಟಕ, ಸಾಂಸ್ಕೃತಿಕ,  ವಿದ್ಯಾ ಕ್ಷೇತ್ರ ಮತ್ತು  ಸಮಾಜ ಸೇವೆಗಳಲ್ಲಿ ಸಕ್ರಿಯರಾಗಿದ್ದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ(107) ಮಂಗಳವಾರ ಬೆಳಿಗ್ಗೆ ನಿಧನರಾದರು.  

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವರು ಸೇರಿದಂತೆ ಮೂವರು ಪುತ್ರರು ಹಾಗೂ ಪುತ್ರಿಯನ್ನು  ಅಗಲಿದ್ದಾರೆ.

ಮೂಡುಬಿದಿರೆಯ ಮಿಜಾರುಗುತ್ತು ಮನೆತನದಲ್ಲಿ 1916ರ ಆಗಸ್ಟ್ 15ರಂದು ಜನಿಸಿದ ಅವರು, ಕಿನ್ನಿಕಂಬಳದ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದರು. ಆದರ್ಶ ಕೃಷಿಕರಾಗಿ ಬದುಕು ಕಂಡವರು. ದಕ್ಷಿಣ ಕನ್ನಡದಲ್ಲಿ  ಅಡಿಕೆ, ತೆಂಗು ಹಾಗೂ ಕ್ಯಾವೆಂಡಿಸ್ ಬಾಳೆ ಕೃಷಿಯನ್ನು ಪರಿಚಯಿಸಿದವರಲ್ಲಿ ಇವರು ಪ್ರಮುಖರಾಗಿದ್ದರು.


ಮೂಡುಬಿದಿರೆಯಲ್ಲಿ ಶೈಕ್ಷಣಿಕ ಕ್ರಾಂತಿಗೆ ಅರಿವಿನ ಸ್ಫೂರ್ತಿಯ ಸೆಲೆಯಾಗಿದ್ದ ಅವರು ಮಿಜಾರು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಡಪದವು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಸ್ಥಾಪಕರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಅವರು ಕ್ರೀಡೆಯ ಹಿರಿಯ ಪ್ರೋತ್ಸಾಹಕರಾಗಿದ್ದರು. ಮಿಜಾರು ಕೋಟಿ ಚೆನ್ನಯ ಜೋಡುಕೆರೆ ಕಂಬಳವನ್ನು ಪರಿಚಯಿಸಿದ ಕೀರ್ತೀ ಅವರಿಗೆ ಸಲ್ಲುತ್ತದೆ. ಮಿಜಾರಿನಲ್ಲಿ ಕಂಬಳ ಆಯೋಜಿಸಿದ್ದ ಅವರು ಆಗಿನ ಮುಖ್ಯಮಂತ್ರಿ ಗುಂಡೂರಾವ್ ಅವರಿಂದ ಉದ್ಘಾಟಿಸಿದ್ದರು.

ಬದುಕಿನ ಸಂಧ್ಯಾಕಾಲದವರೆಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ನಿಕಟವರ್ತಿಯಾಗಿದ್ದ ಆನಂದ ಆಳ್ವರು, ನಾಗಮಂಡಲ, ಬ್ರಹ್ಮಕಲಶ, ದೈವಾರಾಧನೆ ಸೇರಿದಂತೆ ಧರ್ಮ ಮತ್ತು ಸಂಸ್ಕೃತಿಯ ಕೈಂಕರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಮೀನಾಕ್ಷಿ ಬೀಡಿ ಉದ್ಯಮ ಹಾಗೂ ಅಬಕಾರಿ ಗುತ್ತಿಗೆಯನ್ನು ಉದ್ಯಮವಾಗಿ ಕೆಲಕಾಲ ನಿರ್ವಹಿಸಿದ್ದರೂ, ವ್ಯಸನ ಮುಕ್ತ ಸಮಾಜ ನಿರ್ಮಾಣದ ಇಚ್ಛಾಶಕ್ತಿಗೆ ಪ್ರೇರಣೆಯಾಗಿದ್ದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸೇರಿದಂತೆ ಆಳ್ವಾಸ್‌ನ ಆರೋಗ್ಯ ಕೇಂದ್ರ ಮತ್ತಿತರ ಘಟಕಗಳ ಸ್ಥಾಪನೆಯ ಪ್ರೇರಕರು. ತಮ್ಮ ಶತಾಯುಷಿ ಜೀವನದ ಕೊನೆತನಕ ಅದಮ್ಯ ಜೀವನ ಪ್ರೀತಿ ಹೊಂದಿದ್ದ ಅವರದ್ದು, ಸದಾ ಹಸನ್ಮುಖಿ ಹಾಗೂ ಒಳಿತು ಹರಸುವ ಹೃದಯ. ಸೌಹಾರ್ದತೆಯ ಸೆಲೆಯಾಗಿದ್ದ ಆಳ್ವರು, ಸರ್ವ ಧರ್ಮಿಯರೊಂದಿಗೆ ಸಹಬಾಳ್ವೆಯ ಜೀವನ ನಡೆಸಿದವರು. ಬಂಟ ಸಮಾಜದಲ್ಲಿ ಶತಾಯುಷಿಗಳಾದ ಕೆಲವೇ ಕೆಲವರ ಪೈಕಿ ಒಬ್ಬರು. ಹೆಚ್ಚಿನ ಎಲ್ಲ ಚುನಾವಣೆಗಳಲ್ಲಿ ಮತದಾನ ಮಾಡಿದ ಅವರು, ಕಳೆದ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತದಾನಕ್ಕಾಗಿ ಬಂಗಬೆಟ್ಟು ಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು. 

2023ರ ಆಗಸ್ಟ್ 15ರಂದು ಆಳ್ವಾಸ್ ಸಂಸ್ಥೆಯ ಆವರಣದಲ್ಲಿ ಆನಂದ ಆಳ್ವರ 106ನೇ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ಹೆಲ್ತ್ ಸೆಂಟರ್‌ನ ಹೊಸ ಯೋಜನೆ, ನೂತನ ಕಟ್ಟಡಗಳನ್ನು ಅವರ ಪುತ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸ್ವಾತಂತ್ರ್ಯೋತ್ಸವ ಹಾಗೂ ಆನಂದ ಆಳ್ವ ಜನ್ಮದಿನದಂದೇ ಹಲವು ವರ್ಷಗಳು ಉದ್ಘಾಟಿಸಿರುವುದು ಗಮನಾರ್ಹ.


-

ನಾಳೆ ಅಂತಿಮ ದರ್ಶನ:

ಆನಂದ ಆಳ್ವರ ಪಾರ್ಥಿವ ಶರೀರದ ದರ್ಶನಕ್ಕೆ ಮಿಜಾರಿನ ಸ್ವಗೃಹದಲ್ಲಿ ಬುಧವಾರ (ನ.1ರಂದು) ಬೆಳಗ್ಗೆ 9.30ರಿಂದ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪುತ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.

Post a Comment

0 Comments