ಮೂಡುಬಿದಿರೆ: ಪಾಲಡ್ಕ ಗ್ರಾ.ಪಂ.ನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ ಅವರ ಅಧ್ಯಕ್ಷತೆಯಲ್ಲಿ ಕಡಂದಲೆ ಪಲ್ಕೆ ಗಣೇಶ ದರ್ಶನ ಸಭಾಭವನದಲ್ಲಿ ನಡೆಯಿತು.
ಕಡಂದಲೆ ವಿದ್ಯಾಗಿರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 83 ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಆದರೆ ಇಲ್ಲಿ ಶೌಚಾಲಯವು ತೀರ ಹದಗೆಟ್ಟಿದ್ದು ಮಕ್ಜಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ತಕ್ಷಣ ಇಲ್ಲಿಗೆ ಶೌಚಾಲಯವನ್ನು ನಿರ್ಮಿಸುವಂತೆ ಪಂಚಾಯತ್ ಸದಸ್ಯೆ ಸುನೀತಾ ಸುಚರಿತ ಶೆಟ್ಟಿ ಅವರು ಶಿಕ್ಷಣ ಇಲಾಖೆಯ ಅಧಿಕಾರಿ ಮಹೇಶ್ವರಿ ಅವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಿಅರ್ ಪಿ ಅವರು ಶಿಕ್ಷಣ ಇಲಾಖೆಯಲ್ಲಿ ವರ್ಷಕ್ಕೆ 30,000 ಮಾತ್ರ ಅನುದಾನ ಬರುತ್ತಿದ್ದು ಇದು ಇತರ ಕೆಲಸಗಳಿಗೆ ವಿನಿಯೋಗವಾಗುತ್ತಿದೆ ಪಂಚಾಯತ್ ನಿಂದ ನಿರ್ಮಿಸುವುದಾದರೆ ಉತ್ತಮ ಇಲ್ಲದಿದ್ದರೆ ಮುಂದಿನ ಅನುದಾನ ಬಂದಾಗ ಮೊದಲ ಆದ್ಯತೆಯಾಗಿ ಪರಿಗಣಿಸಿ ನಿರ್ಮಿಸುವ ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕಿ ಪ್ರತಿಭಾ ಅವರು ಮಾತನಾಡಿ ಶೌಚಾಲಯ ದುಸ್ಥಿತಿಯಲ್ಲಿ ಮಾತ್ರ ಇರುವುದಲ್ಲ ಅಲ್ಲಿ ದೊಡ್ಡ ದೊಡ್ಡ ಮರಗಳು ಇರುವುದರಿಂದ ಶಾಲೆಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಮರಗಳ ಗೆಲ್ಲುಗಳನ್ನು ತೆಗೆಯುವ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ಉಪವಲಯಾರಣ್ಯಾಧಿಕಾರಿ ಅಶ್ವಿತ್ ಗಟ್ಟಿ ಭರವಸೆ ನೀಡಿದರು.
ಮಕ್ಕಳಿಲ್ಲವೆಂದು ಮುಕ್ಕಡಪ್ಪು ಶಾಲೆಯನ್ನು ಮುಚ್ಚಲಾಗಿದ್ದು ಇಲ್ಲಿ ಅನೈತಿಕ ಚಟುವಟಿಕೆಗೆ ನಾವೇ ವ್ಯವಸ್ಥೆ ಮಾಡಿಕೊಟ್ಟಂತ್ತಾಗಿದೆ ಆದ್ದರಿಂದ ತಕ್ಷಣ ಇಲ್ಲಿ ಭದ್ರತಾ ವ್ಯವಸ್ಥೆಯನ್ನು ಮಾಡಿದರೆ ಉತ್ತಮ ಎಂದು ನಿವೃತ್ತ ಶಿಕ್ಷಕ ಟಿ.ಎನ್ .ಕೆಂಬಾರೆ ಸಲಹೆ ನೀಡಿದರು.
ಪೂಪಾಡಿಕಲ್ಲು ಜನತಾ ಕಾಲನಿಯಲ್ಲಿ ರಸ್ತೆಗೆ ಡಾಂಬರು ಹಾಕದೆ ಮಣ್ಣಿನ ರಸ್ತೆಯಾಗಿಯೇ ಉಳಿದಿದ್ದು ಹೊಂಡಗಳಿಂದ ತುಂಬಿದೆ ಈ ರಸ್ತೆಯನ್ನು ಯಾಕೆ ದುರಸ್ಥಿ ಮಾಡುತ್ತಿಲ್ಲ..? ನಾವೇನು ಓಟು ಹಾಕಿಲ್ಲ ಎಂದು ಜಾನಕಿ ಅವರು ಪ್ರಶ್ನಿಸಿದರು. ವಾರ್ಡಿನ ಸದಸ್ಯರು ಈ ಬಗ್ಗೆ ಗಮನ ಹರಿಸಬೇಕು ಅವರು ಹೇಳಿದರೆ ಮಾತ್ರ ನಮಗೆ ಗೊತ್ತಾಗುವುದು ಎಂದು ಹೇಳಿದ ಪಿಡಿಒ ರಕ್ಷಿತಾ ಅವರು ರಸ್ತೆ ದುರಸ್ಥಿಗೆ ಮುಂದೆ ಅನುದಾನ ಇಡುವುದಾಗಿ ತಿಳಿಸಿದರು.
ನೀರಿನ ಬಿಲ್ಲ್ ಕಟ್ಟಿರುವುವರಿಗೆ ಸರಿಯಾಗಿ ಮುಕ್ಕಾಲು ಗಂಟೆಯಾದರೂ ನೀರನ್ನು ಬಿಡಿ . ಐದು-ಹತ್ತು ನಿಮಿಷ ನೀರು ಬಿಟ್ಟರೆ ಏನು ಪ್ರಯೋಜನ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಕೆಲವರು ನೀರಿನ ಬಿಲ್ಲ್ ಕಟ್ಟದೆ ಬಾಕಿ ಇಟ್ಟಿದ್ದಾರೆ. ಇದರಿಂದಾಗಿ ಪಂಪು ಅಪರೇಟರ್ ಗಳಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ ಆದ್ದರಿಂದ ಎಲ್ಲರೂ ನೀರಿನ ಬಿಲ್ಲ್ ನ್ನು ಸರಿಯಾಗಿ ಪಾವತಿಸುವಂತೆ ಪಿಡಿಓ ಹೇಳಿದರು.
94ಸಿಯಲ್ಲಿ ಮನೆ ಕಟ್ಟಿ ಕುಳಿತುಕೊಂಡವರಿಗೆ ಹಕ್ಕುಪತ್ರ ಸಿಗದಿರುವ ಬಗ್ಗೆ ಫಲಾನುಭವಿಗಳು ಸಭೆಯ ಗಮನಕ್ಕೆ ತಂದರು. ಪೂಪಾಡಿಕಲ್ಲು ಬಳಿ ನಿರ್ಮಾಣವಾಗುತ್ತಿರುವ ಕೆಪಿಟಿಸಿಎಲ್ ಉಪಕೇಂದ್ರದ ಬಳಿ ಕೆಂಪು ಕಲ್ಲಿನ ಕೋರೆ ಕಾರ್ಯಚರಿಸುತ್ತಿದ್ದು ಇದಕ್ಕೆ ಪಂಚಾಯತ್ ಅನುಮತಿ ನೀಡಿದೆಯೇ ಎಂದು ಕೆಂಬಾರೆ ಪ್ರಶ್ನಿಸಿದರು. ಈ ಬಗ್ಗೆ ಪಂಚಾಯತ್ ನ ಗಮನಕ್ಕೆ ಬಂದಿಲ್ಲವೆಂದು ಪಿಡಿಓ ಉತ್ತರಿಸಿದರು.
ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಯುಗೇಂದ್ರ ಇಲಾಖೆಯಲ್ಲಿ ಸಿಗುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಪಂಚಾಯತ್ ಉಪಾಧ್ಯಕ್ಷ ಸುಖೇಶ್ ಶೆಟ್ಟಿ ಮತ್ತು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
0 Comments