ಘನತ್ಯಾಜ್ಯ ಘಟಕ ಅಸಮರ್ಪಕ ನಿರ್ವಹಣೆ: ಡಿಸಿಗೆ ದೂರು ನೀಡಿದ ಪುರಸಭಾ ಸದಸ್ಯರು ಮತ್ತು ಸಾರ್ವಜನಿಕರು

ಜಾಹೀರಾತು/Advertisment
ಜಾಹೀರಾತು/Advertisment

 ಘನತ್ಯಾಜ್ಯ ಘಟಕ ಅಸಮರ್ಪಕ ನಿರ್ವಹಣೆ: ಡಿಸಿಗೆ  ದೂರು ನೀಡಿದ ಪುರಸಭಾ ಸದಸ್ಯರು ಮತ್ತು ಸಾರ್ವಜನಿಕರು



ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಕರಿಂಜೆ ಮಾರಿಂಜಗುಡ್ಡೆಯಲ್ಲಿರುವ ಘನತ್ಯಾಜ್ಯ ಘಟಕವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸಮರ್ಪಕವಾಗಿ ನಿರ್ವಹಣೆಯಾಗುತ್ತಿದ್ದು ಇದರಿಂದಾಗಿ ಪರಿಸರದ ನಿವಾಸಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆಂದು ಪುರಸಭೆ ಸದಸ್ಯರು ಮತ್ತು ಸಾರ್ವಜನಿಕರು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಬುಧವಾರ ದೂರು ನೀಡಿದ್ದಾರೆ.



ಬುಧವಾರ  ತಾಲೂಕು ಆಡಳಿತ ಸೌಧದಲ್ಲಿ ಡಿಸಿಯವರಿಂದ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ದೂರು ನೀಡಿ ಈ ಬಗ್ಗೆ ಚರ್ಚೆ ನಡೆಸಿದರು.

ಈ ಹಿಂದೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉತ್ತಮ ರೀತಿಯಲ್ಲಿ  ನಿರ್ವಹಣೆ ನಡೆಯುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಪುರಸಭೆ ತ್ಯಾಜ್ಯ ನಿರ್ವಹಣೆಯ  ಪರಿಸರ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವ ಆಸಕ್ತಿ ತೋರುತ್ತಿಲ್ಲ. ಅವರು ಕಚೇರಿಯಲ್ಲೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಸುರೇಶ್ ಪ್ರಭು, ಪುರಂದರ ದೇವಾಡಿಗ, ಸುರೇಶ್ ಕೋಟ್ಯಾನ್, ಪಿ.ಕೆ ಥೋಮಸ್, ಕೊರಗಪ್ಪ ಜಿಲ್ಲಾಧಿಕಾರಿಗೆ ದೂರು ನೀಡಿದರು. ನಂತರ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಯೋಜನಾ ನಿರ್ದೇಶಕ ಅಭಿಷೇಕ್ ಅವರು ತ್ಯಾಜ್ಯ ನಿರ್ವಹಣಾ ಘಟಕಕ್ಕೆ ತೆರಳಿ ಪರಿಶೀಲನೆ ನಡೆಸಿದರು.


  ರೈತರ ಹಾಗೂ ಪಂಚಾಯಿತಿ ಗಮನಕ್ಕೆ ತಾರದೆ ಯುಪಿಟಿಸಿಎಲ್‌ನವರು ಬಲವಂತದ ಕಾಮಗಾರಿ ಆರಂಭಿಸಿದ್ದು, ಮನೆ ಹಾಗೂ ಕೃಷಿ ಭೂಮಿಗೆ ಹಾನಿ ಉಂಟಾಗುತ್ತಿದ್ದು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪುತ್ತಿಗೆ , ಪಾಲಡ್ಕ, ಕಡಂದಲೆ, ಮಿತ್ತೂರು ಹಾಗೂ ಕುಪ್ಪೆಪದವು ರೈತರು ಮತ್ತು ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಕೆಪಿಟಿಸಿಎಲ್ ನಿಯಮಾನಮುಸಾರ ಕಾಮಗಾರಿ ನಡೆಸುತ್ತಿದೆ, ಸಂತ್ರಸ್ಥರಿಗೆ ಸಿಗಬೇಕಾದ ಪರಿಹಾರದಲ್ಲಿ ಅನ್ಯಾಯವಾದಲ್ಲಿ ಪರಿಶೀಲಿಸುತ್ತೇನೆ ಎಂದರು.

ಮೂಡುಬಿದಿರೆ ತಾಲೂಕಿನಲ್ಲಿ ತೆಂಗಿನಎಣ್ಣೆ, ಎಳ್ಳೆಣ್ಣೆ ಶುದ್ಧ ರೂಪದಲ್ಲಿ ಸಿಗುವುದು ದುರ್ಲಭವಾಗಿದೆ. ಒಂದೆರಡು ಪುಟ್ಟ ಗಿರಣಿಗಳ ಹೊರತಾಗಿ ಉಳಿದವರು ತೆಂಗಿನ ಎಣ್ಣೆಗೆ ಬೇರೆ ತೈಲ ಬೆರೆಸುವುದು ಸಾಮಾನ್ಯವಾಗಿದೆ. ಹಾಗೇಯೇ ಎಳ್ಳೆಣ್ಣೆ ಮತ್ತು ಇತರ ಖಾದ್ಯ ತೈಲಗಳ ಬಗ್ಗೆಯೂ ಗುಮಾನಿ ಇದೆ. ಹಾಗಾಗಿ ತಾಲೂಕು ಕೇಂದ್ರದಲ್ಲಿ ಖಾದ್ಯತೈಲ ಪರಿಶುದ್ಧತೆ ಪರೀಕ್ಷಣಾ ಕೇಂದ್ರ ಮತ್ತು ಕುಡಿಯುವ ನೀರಿನ ಪರಿಶುದ್ಧತೆ ಪರೀಕ್ಷಣಾ ಕೇಂದ್ರ ತೆರೆಯುವಂತೆ ಸಾರ್ವಜನಿಕರ ನೆಲೆಯಲ್ಲಿ ಪತ್ರಕರ್ತ ಧನಂಜಯ ಮೂಡುಬಿದಿರೆ ಅವರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಇದು ರಾಜ್ಯಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸುವಂತಹ ವಿಚಾರ. ಈ ಕುರಿತು ಆಹಾರ ಸುರಕ್ಷತಾ ವಿಭಾಗದ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 


ಮೂಡುಬಿದಿರೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಮೂಡುಬಿದಿರೆ ಮನವಿ ಸಲ್ಲಿಸಿತು. 

ಮೂಡುಬಿದಿರೆಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಬೇಕು ಹಾಗೂ ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಭಾರತೀಯ ರೈತ ಸೇನೆ ಮನವಿ ಸಲ್ಲಿಸಿತು. ಇಂದಿರಾ ಕ್ಯಾಂಟೀನ್ ತೆರೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ್‌ಗೆ ಸೂಚಿಸಿದರು. ಸಹಾಯಕ ಕಮಿಷನರ್ ಹರ್ಷವರ್ಧನ್, ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ಪುರಸಭೆ ಮುಖ್ಯಾಧಿಕಾರಿ ಶಿವ ನಾಯ್ಕ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. 

ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 34 ಅರ್ಜಿಗಳು ಸಲ್ಲಿಕೆಯಾದವು.

ಮಾರಿಂಜಗುಡ್ಡೆಯ ಘನತ್ಯಾಜ್ಯ ನಿರ್ವಹಣೆ ಘಟಕದ ಸಮಸ್ಯೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಸಭೆಯಲ್ಲಿ ಪುರಸಭೆ ಸದಸ್ಯರು ಮತ್ತು ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಸ್ಥಳೀಯರು ಮತ್ತು ಪತ್ರಕರ್ತರು ಸ್ಥಳಕ್ಕೆ ತೆರಳಿ ಸುಮಾರು ಎರಡು ತಾಸು ಕಾದು ಕುಳಿತರೂ ಜಿಲ್ಲಾಧಿಕಾರಿ ಭೇಟಿ ನೀಡದೆ ತೆರಳಿದ್ದು ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಅಸಮಧಾನಗೊಂಡರು. 

ಕಳೆದ ಎಂಎಲ್‌ಎ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲೆಯ ಖಾಸಗಿ ಬಸ್‌ಗಳ ಬಾಡಿಗೆ ಇನ್ನೂ ಪಾವತಿಯಾಗದೆ ಬಸ್ ಮಾಲೀಕರಿಗೆ ತೊಂದರೆ ಆಗಿದೆ ಎಂದು ಕೆನರಾ ಬಸ್ ಮಾಲಕರ ಸಂಘ ಮೂಡುಬಿದಿರೆ ವಲಯ ಅಧ್ಯಕ್ಷ ನಾರಾಯಣ ಪಿ.ಎಂ. ಮನವಿ ಮಾಡಿದರು. ಈ ಮನವಿ ಚುನಾವಣೆ ಆಯೋಗಕ್ಕು ಹೋಗಿದ್ದು ಪರಿಶೀಲನೆ ನಡೆಯುತ್ತಿದೆ. ನಾನೂ ಮಾತನಾಡುತ್ತೇನೆ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.

 ಸಹಾಯಕ ಆಯುಕ್ತ

Post a Comment

0 Comments