ಮೂರೂ ಜಿಲ್ಲೆಗೆ ಕೋಟ ಒಬ್ಬರೇ ಸ್ಟಾರ್ ಪ್ರಚಾರಕ ಎಡೆಬಿಡದೆ ಪ್ರಚಾರ ಕೈಗೊಂಡ ಸಿಂಪಲ್ ಸ್ಟಾರ್

 ಮೂರೂ ಜಿಲ್ಲೆಗೆ ಕೋಟ ಒಬ್ಬರೇ ಸ್ಟಾರ್  ಪ್ರಚಾರಕ ಎಡೆಬಿಡದೆ ಪ್ರಚಾರ ಕೈಗೊಂಡ ಸಿಂಪಲ್ ಸ್ಟಾರ್



ಬಹು ನಿರೀಕ್ಷಿತ ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು ನಾಯಕರು, ಕಾರ್ಯಕರ್ತರು ಆದಿಯಾಗಿ ವಿಶ್ರಾಂತಿಯ ಜೊತೆಗೆ ಫಲಿತಾಂಶದ ಕುತೂಹಲದಲ್ಲಿದ್ದಾರೆ.



ಈ ನಡುವೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಒಂದಷ್ಟು ಕೆಲಸ ಕಾರ್ಯಗಳು ಮತ್ತು ಕಾರ್ಯಕರ್ತರ ಭೇಟಿಯಲ್ಲಿ ತೊಡಗಿಸಿಕೊಂಡಿದ್ದಾರೆ.



ಈ ಬಾರಿಯ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಒಬ್ಬರೇ ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿಯ ವರಿಷ್ಠರು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹಾಕಿದ್ದರು.  ಈ ಹಿನ್ನೆಲೆಯಲ್ಲಿ ನಿರಂತರವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮಿಂಚಿನ ಪ್ರಚಾರ ಕೈಗೊಂಡಿದ್ದಾರೆ.



ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಪೂಜಾರಿಯವರ ತವರು ಕ್ಷೇತ್ರವಾಗಿದ್ದು ಉತ್ತರ ಕನ್ನಡ ಜಿಲ್ಲೆ ಅವರ ಉಸ್ತುವಾರಿ ಜಿಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಬಿಜೆಪಿ ಗೆಲ್ಲಿಸುವ ಹೊಣೆಗಾರಿಕೆ ಇವರ ಮೇಲಿತ್ತು.



ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ, ಕಾಪು ವಿಧಾನಸಭಾ ಕ್ಷೇತ್ರ, ಕುಂದಾಪುರ ವಿಧಾನಸಭಾ ಕ್ಷೇತ್ರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿಧಾನಸಭಾ ಕ್ಷೇತ್ರ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಮತ್ತು ಸುಳ್ಯಕ್ಕೆ ಹೆಚ್ಚಿನ ಗಮನ ಹರಿಸಿದ್ದರು. ಉಳಿದ ಎಲ್ಲಾ ಕ್ಷೇತ್ರಗಳಿಗೆ ಒಂದೆರಡು ಬಾರಿ ಭೇಟಿ ನೀಡಿ ಪ್ರಚಾರ ಕೈಗೊಂಡಿದ್ದರೆ ಈ ಕ್ಷೇತ್ರಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಬಾರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಕಾರಣ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಚಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಉಡುಪಿ ಸಂಸದೆ  ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯೂ ಮತ್ತು ಬಿಜೆಪಿ ಚುನಾವಣಾ ಮಾಧ್ಯಮ ಜವಬ್ದಾರಿ ಇದ್ದ ಕಾರಣ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆಯಬೇಕಾಯ್ತು. ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಈ ಬಾರಿ ಪ್ರಚಾರದ ಕಣದಲ್ಲಿ ವಿಮುಖವಾಗಿದ್ದರು. ಇತ್ತ ಸಚಿವ ಸುನಿಲ್ ಕುಮಾರ್ ರವರಿಗೆ ತಮ್ಮ ಕ್ಷೇತ್ರ ಕಾರ್ಕಳವೇ ಸವಾಲಾಗಿತ್ತು. ಹೀಗಾಗಿ ಇವರೆಲ್ಲರ ಹೊರೆ ಸಚಿವ ಕೋಟ ಶ್ರೀನಿವಾಸ ಪೂಜಾರಿವರ ಮೇಲೆ ಬಿದ್ದಿದ್ದು ಅವರೂ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂಬುದು ಕಾರ್ಯಕರ್ತರು ಮತ್ತು ನಾಯಕರ ಅಭಿಪ್ರಾಯವಾಗಿದೆ.


ಪ್ರಾಮಾಣಿಕ, ಸರಳತೆ ಮತ್ತು ಯಾವುದೇ ಕಳಂಕವನ್ನು ಮೆತ್ತಿಕೊಳ್ಳದ ರಾಜಕಾರಣಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಮೂರೂ ಜಿಲ್ಲೆಗಳ ಬಹುತೇಕ ಅಭ್ಯರ್ಥಿಗಳ ಅಪೇಕ್ಷಿತ ನಾಯಕರಾಗಿದ್ದರು. ಮಾತ್ರವಲ್ಲದೆ ಇತರೆ ಜಿಲ್ಲೆಗಳ ನಾಯಕರೂ ಇವರನ್ನು ಆಹ್ವಾನಿಸಿದ್ದು ಶಿವಮೊಗ್ಗದ ಸೊರಬ, ತೀರ್ಥಹಳ್ಳಿ, ಮೈಸೂರಿನ ವರುಣ ಸಹಿತ ಇತರೆಡೆ ಪ್ರಚಾರ ಕೈಗೊಂಡಿದ್ದರು.

Post a Comment

0 Comments

Advertisement