ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಭಾರತೀಯ ಕಿಸಾನ್ ಸಂಘದ ಇರುವೈಲು ಘಟಕದ ಅಧ್ಯಕ್ಷ ರಾಜೇಶ್ ಪೂಜಾರಿ ಕಾಳೂರು ಮತ್ತು ತೋಡಾರು ಘಟಕದ ಅಧ್ಯಕ್ಷ ಸುನೀಲ್ ಶೆಟ್ಟಿ ಇರುವೈಲ್ ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ಹಾ ಅವರ ಮೂಲಕ ಜಿಲ್ಲಾಧಿಕಾರಿಗೆ ಸೋಮವಾರ ಮನವಿಯನ್ನು ಸಲ್ಲಿಸಿದರು.
ದ.ಕ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿ ಡೀಮ್ಡ್ ಮೂಡುಬಿದಿರೆ ತಾಲೂಕಿನ ರೈತರು ಪಕ್ಷ ಭೇದ, ಜಾತಿ-ಮತ ಮರೆತು ಮುಖ್ಯಮಂತ್ರಿಯವರು ತಾಲೂಕಿಗೆ ಬಂದಿರುವ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ರೈತರು ಒಗ್ಗಟ್ಟಾಗಿ ಡೀಮ್ಡ್ ತೆಗೆಯಬೇಕೆಂದು ಘೋಷಣೆಯಾಗಿದೆ ಎಂದಾದರೆ ಅದಕ್ಕೆ ಕಾರಣ ಮೂಡುಬಿದಿರೆ ತಾಲೂಕಿನ ರೈತರು. ನಂತರ ಹಲವು ಡೀಮ್ಡ್ ನಲ್ಲಿರುವ ಸರ್ವೇಗಳನ್ನು ತೆಗೆಯಲಾಗಿದ್ದು, ಸಂಪೂರ್ಣವಾಗಿ ಎಲ್ಲಾ ಸರ್ವೇ ನಂಬರ್ ಗಳನ್ನು ತೆಗೆಯಬೇಕೆಂದು ಎಲ್ಲಾ ಕಡೆಗಳಲ್ಲಿಯೂ ಹೋರಾಟ ನಡೆಸಲಾಗಿದ್ದು, ನ.10 ರಂದು ಕಿಸಾನ್ ಸಂಘದಿಂದ ನಡೆಯುವ ಬೃಹತ್ ಹಕ್ಕೋತ್ತಾಯ ಜಾಥಾ ಕೈಗೊಂಡಿದ್ದು, ಎಲ್ಲಾ ರೈತರು ಈ ಜಾಥಾದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ , ಇರುವೈಲು ಭಾರತೀಯ ಕಿಸಾನ್ ಸಂಘದ ಗೌರವಾಧ್ಯಕ್ಷ ದಿನೇಶ್ ಶೆಟ್ಟಿ ದೊಡ್ಡಗುತ್ತು, ತೋಡಾರು ಭಾ.ಕಿ.ಸಂಘದ ಗೌರವಾಧ್ಯಕ್ಷ ಪುಷ್ಪಾದಂತ್ ಜೈನ್, ತೋಡಾರು ಭಾ.ಕಿ.ಸಂಘದ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮತ್ತಿತರರು ಈ ಸಂದರ್ಭದಲ್ಲಿದ್ದರು.
0 Comments