ಮೂಡುಬಿದಿರೆ: ದ.ಕ.ಜಿ.ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ಮತ್ತು ಸಾರ್ವಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ವಲಯ ಮಟ್ಟದ 'ರಾಷ್ಟ್ರೀಯ ಪೋಷಣ್ ಮಾಸಾಚರಣೆ" ಕಾರ್ಯಕ್ರಮವು ಸಮಾಜ ಮಂದಿರ ಸಭಾದ ಸ್ವರ್ಣ ಮಂದಿರದಲ್ಲಿ ಗುರುವಾರ ನಡೆಯಿತು.
ತಾಲೂಕು ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸಬೇಕು, ಬಾಣಂತಿಯರಿಗೆ ಮತ್ತು ಕಿಶೋರಿಯರಿಗೆ ಮತ್ತು ಮಕ್ಕಳಿಗೂ ಇಂತಹ ಆಹಾರಗಳನ್ನು ನೀಡಬೇಕು. ಸದೃಢವಾದ ಸಮಾಜವನ್ನು ನಿರ್ಮಾಣಕ್ಕೆ ಯುವ ಪೀಳಗೆ ಸದೃಢವಾಗಿ ಬೆಳೆಯಬೇಕಾಗಿದೆ. ಆದ್ದರಿಂದ ಉತ್ತಮವಾದ ಆಹಾರ ಸೇವನೆ ಅಗತ್ಯ ಎಂದು ಸಲಹೆ ನೀಡಿದರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪೌಷ್ಟಿಕಾಂಶವುಳ್ಳ ತರಕಾರಿ ಮತ್ತು ಕಾಳುಗಳನ್ನು ನಾವೆಲ್ಲರೂ ಸೇವಿಸಬೇಕು. ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಸೇವಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ನಿಗಾ ವಹಿಸುತ್ತಿದ್ದಾರೆ.ಅಲ್ಲದೆ ಗರ್ಣಣಿಯರಿಗೆ ಮತ್ತು ಮಕ್ಕಳಗೆ ಸರಕಾರದಿಂದ ಸಿಗುವ ಸವಲತ್ತುಗಳು ಅವರ ಮನೆಗೆ ತಲುಪಿಸುವಂತಹ ಉತ್ತಮ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದಾರೆಂದು ಹೇಳಿದರು.
ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕಾರಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮುದಾಯದಿಂದ ಅಂಗನವಾಡಿ ಅದೇ ರೀತಿ ಅಂಗನವಾಡಿ ಕೇಂದ್ರಗಳಿಂದ ಸಮುದಾಯ ಎಂಬ ರೀತಿಯಲ್ಲಿ ಕೆಲಸಗಳನ್ನು ನಡೆಸುತ್ತಿದ್ದೇವೆ. ಶ್ರೀಮಂತರು ಬಡವರೆನ್ನದೆ ಎಲ್ಲರನ್ನು ಸೇರಿಸಿ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ರಕ್ತ ಹೀನತೆಯಿಂದ ಬಳಲುತ್ತಿರುವ ಶಿಶು ಮತ್ತು ತಾಯಂದಿರ ಮರಣವನ್ನು ತಪ್ಪಿಸಬಹುದು ಎಂದರು.
ವಲಯದ ೧೦ ಮಂದಿ ಸ್ತ್ರೀಯರಿಗೆ ಹೂ ಮುಡಿಸಿ, ಬಳೆ ತೊಡಿಸಿ, ಮಡಿಲು ತುಂಬಿಸುವ ಮೂಲಕ ಸೀಮಂತ ಶಾಸ್ತ್ರವನ್ನು ಮಾಡಲಾಯಿತು ಹಾಗೂ
ಮೂರು ಮಂದಿ ಪುಟಾಣಿ ಮಕ್ಕಳಿಗೆ ಅನ್ನ ಪ್ರಾಶಣ ಮಾಡಿಸಲಾಯಿತು. ಪುರಸಭಾ ಸದಸ್ಯ ರಾಜೇಶ್ ನಾಯ್ಕ, ಪೋಷಣ ಅಭಿಯಾನದ ಜಿಲ್ಲಾ ಸಂಯೋಜಕಿ ಬಬಿತಾ, ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಡಾ|ರಮೇಶ್ ಹೊಳ್ಳ, ತಾಲೂಕು ಕಾರ್ಯನಿರ್ವಹಣಾಧಿಕಾರಿ ದಯಾವತಿ, ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಶು ಅಭಿವೃದ್ಧಿ ಯೋಜನೆಯ ಮೂಡುಬಿದಿರೆ ವಲಯ ಮೇಲ್ವಿಚಾರಕಿ ಭಾರತಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಲತಾ ಕಾರ್ಯಕ್ರಮ ನಿರೂಪಿಸಿದರು, ರೇಖಾ ವಂದಿಸಿದರು.
ಪೌಷ್ಠಿಕಾಂಶವುಳ್ಳ ವಿವಿಧ ತಿಂಡಿ ತಿನಿಸು, ತರಕಾರಿ ಹಾಗೂ ಜ್ಯೂಸ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
0 Comments