ಸಮಾಜದ ಒಳಿತಿಗಾಗಿ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡಿ : ಕೇಮಾರು ಶ್ರೀ
ಮೂಡುಬಿದಿರೆ: ಮೊಗೇರ ಸಮುದಾಯ ಅತ್ಯಂತ ಮುಗ್ಧ ಸಮುದಾಯ. ದೇವರಿಗೆ ಹತ್ತಿರವಿರುವ ಸಮುದಾಯ. ಆ ಮುಗ್ಧತೆಯನ್ನು ಉಳಿಸಿಕೊಳ್ಳಿ. ಸಮಾಜ ಒಳಿತಾಗಬೇಕಾದರೆ ತಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು ಎಂದು ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ನುಡಿದರು.
ಕನ್ನಡ ಭವನದಲ್ಲಿ ನಡೆದ ಸಮಾನ ಮನಸ್ಕ ಮುಗೇರ ಬಂಧುಗಳು ಮತ್ತು ಶ್ರೀ ಬ್ರಹ್ಮ ಮುಗೇರ ದೈವಸ್ಥಾನಗಳ ಆಶ್ರಯದಲ್ಲಿ ಮುಗೇರ ಸಮಾಜದ ಸಮಗ್ರ ಅಭಿವೃದ್ಧಿ, ಏಕತೆಗಾಗಿ ನಡೆದ ಸಾಮೂಹಿಕ ವಿಶೇಷ ಪೂಜೆ ಹಾಗೂ ಮಹಾಪ್ರಸಾದದ ಭವ್ಯ ಮೆರವಣಿಗೆ ಮತ್ತು ಚಿಂತನ - ಮಂಥನ ಕಾರ್ಯಕ್ರಮದಲ್ಲಿ ಆಶೀವ೯ಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಭರತ್ ಶೆಟ್ಟಿ, ಅಂಬೇಡ್ಕರ್ ಅವರ ಮೂಲ ಉದ್ದೇಶವೇ ಇಡೀ ಸಮಾಜವನ್ನು ಮುಖ್ಯವಾಹಿನಿಗೆ ತರಲು ಶಿಕ್ಷಣ ಕೊಡಬೇಕು. ಜ್ಞಾನದ ಮೂಲಕ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಅವಕಾಶವಿದೆ ಎಂದರು.
ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಮಾತನಾಡಿ ಮೊಗೇರ ಸಮುದಾಯ ಆರ್ಥಿಕವಾಗಿ ಶ್ರೀಮಂತ ಅಲ್ಲ. ಆದರೆ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಸಮುದಾಯ. ಸಂಪ್ರದಾಯಗಳೇ ಸಂಸ್ಕೃತಿಯ ಅಂತಿಮವಲ್ಲ. ಸಂಸ್ಕೃತಿಯನ್ನು ಪ್ರತಿನಿಧಿಸುವ ಕೆಲಸವನ್ನು ಕೆಲವು ಸಂಪ್ರದಾಯಗಳು ಮಾಡುತ್ತಿವೆ. ಯಾವುದು ಸಂಸ್ಕಾರ ಉಳ್ಳದ್ದೋ ಅದೇ ಸಂಸ್ಕೃತಿ. ಶಿಕ್ಷಣದ ಮೂಲಕವೇ ಸಂಸ್ಕೃತಿ ಬೆಳೆಯುವುದು. ಆದರೆ ಶಿಕ್ಷಣ ಆ ರೀತಿ ಇದೆಯಾ ಎಂಬುವುದು ನಮ್ಮ ಮುಂದಿರುವ ಪ್ರಶ್ನೆ ಎಂದರು.
ಇದಕ್ಕೂ ಮೊದಲು ಸಾಮೂಹಿಕ ವಿಶೇಷ ಪೂಜೆ ಹಾಗೂ ಮಹಾಪ್ರಸಾದದ ಭವ್ಯ ಮೆರವಣಿಗೆಗೆ ಶಾಸಕ ಉಮಾನಾಥ ಕೋಟ್ಯಾನ್ ವೆಂಕಟರಮಣ ದೇವಸ್ಥಾನದಲ್ಲಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ದೈವಾರಾಧನೆ ಮತ್ತು ಮೊಗೇರ ಬಾಂಧವರಲ್ಲಿ ಆದ ಮತ್ತು ಆಗಬೇಕಾದ ಪರಿವರ್ತನೆಗಳ ಬಗ್ಗೆ ವಿಮರ್ಶೆ ನಡೆಯಿತು. ಬಳಿಕ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ 54 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಸಮುದಾಯದ ಶಿಕ್ಷಕರು, ಶಿಕ್ಷಕಿಯರು ಮತ್ತು ಯೋಧರು ಹಾಗೂ ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತರನ್ನು ಗೌರವಿಸಲಾಯಿತು.
ಎಲ್ಲ ಮೊಗೇರ ದೈವಸ್ಥಾನಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಮೂಡುಬಿದಿರೆ ಉಪ ತಹಸೀಲ್ದಾರ್ ರಾಮ.ಕೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಅಶೋಕ್.ಎಂ.ಕೆ ಹಾಗೂ ಶಶಿಕಲಾ ನಡಿಗುಡ್ಡೆ ನಿರೂಪಿಸಿದರು.
0 Comments