ನವದೆಹಲಿ: ಕರ್ನಾಟಕ, ಕೇರಳ ಸೇರಿದಂತೆ 10 ರಾಜ್ಯಗಳಿಗೆ ಎನ್ಐಎ ಹಾಗೂ ಇಡಿ ಅಧಿಕಾರಿಗಳು ಬುಧವಾರ ಮಧ್ಯರಾತ್ರಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಪಿಎಫ್ಐ, ಎಸ್ಡಿಪಿಐ ನಾಯಕರನ್ನು ಗುರಿಯಾಗಿಸಿ ಬೆಂಗಳೂರು, ಮಂಗಳೂರು ಸೇರಿ ರಾಜ್ಯದಲ್ಲಿ 8 ಕಡೆ ಎನ್ಐಎ ದಾಳಿ ನಡೆಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇನ್ನು, ಕೇರಳದಲ್ಲಿ ಮಧ್ಯರಾತ್ರಿಯಿಂದಲೇ ಎನ್ಐಎ ಅಧಿಕಾರಿಗಳು ಸುಮಾರು 50 ಕಡೆ ರೇಡ್ ಮಾಡುತ್ತಿದ್ದಾರೆ.
ಕೇರಳದಲ್ಲಿ ಪ್ರಮುಖವಾಗಿ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಪಿಎಫ್ಐ ಮುಖ್ಯಸ್ಥ ಓಎಂಎ ಸಲಾಮ್ ನಿವಾಸದ ಮೇಲೆ ಮಧ್ಯರಾತ್ರಿಯೇ ಎನ್ಐಎ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದು, ಈ ಹಿನ್ನೆಲೆ ಪಿಎಫ್ಐ ಕಾರ್ಯಕರ್ತರು ಎನ್ಐಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ತಮಿಳುನಾಡು ಸೇರಿ ದೇಶದ 10 ರಾಜ್ಯಗಳಲ್ಲಿ ರೇಡ್ ನಡೆಯುತ್ತಿದ್ದು, ಈ ವೇಳೆ 100 ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಎನ್ಐಎ ಅಧಿಕಾರಿಗಳು ಪಿಎಫ್ಐ ಹಾಗೂ ಎಸ್ಡಿಪಿಐ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ.ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಗಾ ಅಪಾರ್ಟೆಂಟ್ ಮೇಲೆ ದಾಳಿ ನಡೆದಿದೆ. ಕಣ್ಣೂರು ಮುಖ್ಯರಸ್ತೆಯಲ್ಲಿರುವ ರಾಗಾ ಅಪಾರ್ಟೆಂಟ್ನಲ್ಲಿ ಎನ್ಐಎ ಅಧಿಕಾರಿಗಳು ಭಾರಿ ಭದ್ರತೆಯೊಂದಿಗೆ ರೇಡ್ ಮಾಡಿದ್ದು, ಎನ್ಐಎ ತಂಡ ಪರಿಶೀಲನೆ ನಡೆಸುತ್ತಿದೆ. ಮಂಗಳೂರಿನಲ್ಲೂ ಎನ್ಐಎ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಎಫ್ಐ ಹಾಗೂ ಎಸ್ಡಿಪಿಐ ನಾಯಕರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ಪಿಎಫ್ಐ ಮತ್ತು ಎಸ್ಡಿಪಿಐ ಜಿಲ್ಲಾ ಕಚೇರಿ ಮೇಲೆ ದಾಳಿ ನಡೆಸಿದೆ. ಬಜಪೆ, ಜೋಕಟ್ಟೆ ಸೇರಿ ಹಲವೆಡೆ ಮನೆಗಳ ಮೇಲೆ ರೇಡ್ ನಡೆದಿದೆ. ಎನ್ಐಎ ದಾಳಿ ನಡೆಸುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದು, ಗೋ ಬ್ಯಾಕ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
0 Comments